ತೆಂಕನಿಡಿಯೂರು: ಅರ್ಥನಾರೀಶ್ವರ ತಂಡ ಪ್ರೊ ಕಬಡ್ಡಿ ಚಾಂಪಿಯನ್

ಉಡುಪಿ, ಮಾ.8: ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ಮತ್ತು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿ ಯಲ್ಲಿ ಕಾರ್ಕಳ ತಾಲೂಕು ಮುಟ್ಲುಪಾಡಿಯ ಅರ್ಥನಾರೀಶ್ವರ ತಂಡ ಅಗ್ರಸ್ಥಾನ ದೊಂದಿಗೆ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಫೈನಲ್ನಲ್ಲಿ ಅರ್ಧನಾರೀಶ್ವರ ತಂಡ, ಮೂಡಬಿದ್ರೆಯ ಬಲಿಷ್ಠ ಆಳ್ವಾಸ್ ತಂಡವನ್ನು ಪರಾಭವಗೊಳಿಸಿತು. ಆಳ್ವಾಸ್ ತಂಡವು ರನ್ನರ್ಅಪ್ ಪ್ರಶಸ್ತಿ ಗಳಿಸಿತು. ಉಜಿರೆ ಎಸ್.ಡಿ.ಎಂ. ಕಾಲೇಜು ತಂಡ ತೃತೀಯ ಹಾಗೂ ತತ್ವಮಸಿ ಬಿಗಾಂಬಲ ತಂಡವು ಚತುರ್ಥ ಸ್ಥಾನಗಳನ್ನು ಪಡೆದವು.
ಆಳ್ವಾಸ್ ತಂಡದ ವಿಶ್ವನಾಥ್ ಅತ್ಯುತ್ತಮ ರೈಡರ್, ಅರ್ಥನಾರೀಶ್ವರ ತಂಡದ ಪ್ರೀತಮ್ ಅತ್ಯುತ್ತಮ ಡಿಫೆಂಡರ್, ಎಸ್.ಡಿ.ಎಂ.ನ ಶಶಾಂಕ್ ಸರ್ವಾಂಗೀಣ ಆಟಗಾರ ಪ್ರಶಸ್ತಿ ಗೆದ್ದುಕೊಂಡರು. ಜಿಲ್ಲೆಯ ಒಟ್ಟು ಹದಿನಾರು ಕಬಡ್ಡಿ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.
ಶಾಸಕ ರಘುಪತಿ ಭಟ್ ಟೂರ್ನಿಯನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹರಿಯಪ್ಪ ಕೋಟ್ಯಾನ್, ಶಿಕ್ಷಣತಜ್ಞ ದಯಾನಂದ ಶೆಟ್ಟಿ ಕೊಜಕುಳಿ, ಪ್ರಾಂಶುಪಾಲ ವಿಶ್ವನಾಥ ಕರಬ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ವತಿಯಿಂದ ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ, ಪ್ರಾಂಶುಪಾಲ ಡಾ.ಗಣನಾಥ ಶೆಟ್ಟಿ ಎಕ್ಕಾರು, ಕಾಲೇಜಿ ಸಿಬ್ಬಂದಿ ಯು. ಶೇಖ್ ಸಾಬ್ಜಾನ್ ಸಾಹೇಬ್, ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಹಾಗೂ ಕಾತ್ಯಾಯಿನಿ ಆಳ್ವ ಇವರನ್ನು ಸನ್ಮಾನಿಸಲಾಯಿತು.
ಪ್ರಸ್ತಾವನೆಯ ಮಾತುಗಳೊಂದಿಗೆ ತೆಂಕನಿಡಿಯೂರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರ ಡಾ. ರಾಮಚಂದ್ರ ಪಾಟ್ಕರ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ರತ್ನಮಾಲಾ ವಂದಿಸಿದರೆ, ತೇಜಸ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.