ಅಂಬಲಪಾಡಿ ಯಕ್ಷಗಾನ ಮಂಡಳಿಯಿಂದ ಯಕ್ಷ ಪ್ರಶಸ್ತಿ ಪ್ರದಾನ
![ಅಂಬಲಪಾಡಿ ಯಕ್ಷಗಾನ ಮಂಡಳಿಯಿಂದ ಯಕ್ಷ ಪ್ರಶಸ್ತಿ ಪ್ರದಾನ ಅಂಬಲಪಾಡಿ ಯಕ್ಷಗಾನ ಮಂಡಳಿಯಿಂದ ಯಕ್ಷ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2022/03/8/327384-1646750412.jpg)
ಉಡುಪಿ, ಮಾ.8: ಉಡುಪಿ ಅಂಬಲಪಾಡಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 64ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾಲ್ವರು ಹಿರಿಯ ಕಲಾವಿದರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಅಂಬಲಪಾಡಿಯ ಜನಾರ್ದನ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಬೆಂಗಳೂರಿನ ಗಾನಸೌರಭ ಯಕ್ಷಗಾನ ಶಾಲೆ, ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ವಿದ್ವಾನ್ ಗಣಪತಿ ಭಟ್, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ರಾಜೀವ ತೋನ್ಸೆ ಮತ್ತು ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಪದ್ಮನಾಭ ಗಾಣಿಗ ಇವರಿಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳರು ಪ್ರದಾನ ಮಾಡಿ ಗೌರವಿಸಿದರು.
ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯು ಹತ್ತು ಸಾವಿರ ರೂ ಹಾಗೂ ಉಳಿದ ಪ್ರಶಸ್ತಿಗಳು ತಲಾ ಎಂಟು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿವೆ. ಅತಿಥಿಗಳಾಗಿ ಆಗಮಿಸಿದ ಖ್ಯಾತ ನ್ಯಾಯವಾದಿ ಎ.ಸಂಕಪ್ಪ ಇವರು ಮಂಡಳಿಯ ಚಟುವಟಿಕೆಗಳನ್ನು ಮೆಚ್ಚಿ ಒಂದು ಲಕ್ಷ ರೂ. ದೇಣಿಗೆ ಘೋಷಿಸಿದರು.
ಅತಿಥಿಗಳಾಗಿ ಕರ್ಣಾಟಕ ಬ್ಯಾಂಕಿನ ಎಜಿಎಂ ರಾಜಗೋಪಾಲ ಆಚಾರ್ಯ, ಅಗ್ನಿಹೋತ್ರಿ ವಿದ್ವಾನ್ ಅಡ್ವೆ ಲಕ್ಷ್ಮೀಶ ಆಚಾರ್ಯ ಭಾಗವಹಿಸಿದ್ದರು. ನಿರ್ದೇಶಕ ರಾದ ನರಸಿಂಹ ತುಂಗರನ್ನು ಡಾ.ವಿಜಯ ಬಲ್ಲಾಳ್ ಸನ್ಮಾನಿಸಿದರು.
ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್ ಸ್ವಾಗತಿಸಿ, ಮುರಲಿ ಕಡೆಕಾರ್ ಪ್ರಸ್ತಾವನೆಗೈದರು. ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಪ್ರೊ.ನಾರಾಯಣ ಎಂ. ಹೆಗಡೆ ಮಾಡಿದರು. ನಟರಾಜ ಉಪಾಧ್ಯಾಯ ಮತ್ತು ಮಂಜುನಾಥ ತೆಂಕಿಲ್ಲಾಯ ಕಾರ್ಯಕ್ರಮ ನಿರ್ವಹಿಸಿದರೆ, ಕಾರ್ಯದರ್ಶಿ ಸುನಿಲ್ ಕುಮಾರ್ ವಂದಿಸಿದರು.
ಕಾರ್ಯಕ್ರಮದ ಬಳಿಕ ಮಂಡಳಿಯ ಬಾಲ ಕಲಾವಿದರಿಂದ ’ಮೈಂದದ್ವಿವಿದ ಕಾಳಗ’ ಮತ್ತು ’ರುಗ್ಮಾವತಿ ಕಲ್ಯಾಣ’ ಯಕ್ಷಗಾನ ಪ್ರಸ್ತುತಗೊಂಡಿತು