ವಿರಾಜಪೇಟೆ : ತಂದೆ, ಮಗ ಆತ್ಮಹತ್ಯೆಗೆ ಶರಣು

ಮಡಿಕೇರಿ : ತಂದೆ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ವಿರಾಜಪೇಟೆಯ ಬಿಳುಗುಂದ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿಗಳಾದ ಸುಬ್ಬಯ್ಯ (76) ಹಾಗೂ ಅವರ ಪುತ್ರ ಗಿರೀಶ್ (39) ಮೃತರು. ಮಾ.7 ರಂದು ಸಂಜೆ ಮಂಡಲ ಕಚೇರಿಗೆ ಹೋಗಿ ಬರುವುದಾಗಿ ತೆರಳಿದ್ದ ಸುಬ್ಬಯ್ಯ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸಮೀಪದ ತೋಟವೊಂದರಲ್ಲಿ ಪತ್ತೆಯಾಗಿತ್ತು. ಇದರಿಂದ ಮನನೊಂದ ಪುತ್ರ ಗಿರೀಶ್ ಮಾ.8 ರಂದು ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಸುಬ್ಬಯ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಗಿರೀಶ್ ಪತ್ನಿಯನ್ನು ತೊರೆದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುಬ್ಬಯ್ಯ ಅವರ ಪತ್ನಿ ಕಾವೇರಮ್ಮ ನೀಡಿರುವ ದೂರಿನ ಹಿನ್ನೆಲೆ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





