ಕನ್ನರ್ಪಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ
ಉಡುಪಿ, ಮಾ.9: ಕಡೆಕಾರು ಗ್ರಾಮದಲ್ಲಿರುವ ಕನ್ನರ್ಪಾಡಿಯ ಇತಿಹಾಸ ಪ್ರಸಿದ್ಧ ಶ್ರೀಜಯದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಸುಮಾರು 15 ಕೋಟಿ ರೂ.ವೆಚ್ಚದಲ್ಲಿ ಅಂತಿಮ ಹಂತದಲ್ಲಿದ್ದು, ಶ್ರೀದೇವಿಗೆ ಅಷ್ಟಬಂಧ-ಬ್ರಹ್ಮಕುಂಭಾಭಿಷೇಕವು ಎಪ್ರಿಲ್ 2ರಿಂದ 10ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿಯ ಕೋಶಾದಿಕಾರಿ ಕೆ.ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪುತ್ತೂರು ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ದೇವಸ್ಥಾನದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕೋಟಿ ಕುಂಕುಮಾರ್ಚನೆ, ನವಚಂಡಿಕಾಯಾಗ, ರಾಶಿ ಪೂಜೆ ಮುಂತಾದ ಕಾರ್ಯಗಳು ನಡೆಯಲಿವೆ ಎಂದರು.
ದೇವಸ್ಥಾನದ ತೀರ್ಥಮಂಟಪ, ಸುತ್ತುಪೌಳಿ, ಅಗ್ರಸಭೆ, ವಾಲಗ ಮಂಟಪ, ನಾಗಸನ್ನಿಧಿ, ರಕ್ತೇಶ್ವರಿ, ನಂದಿಗೋಣ, ಕಲ್ಕುಡ ಸಾನಿಧ್ಯ, ಬಯಲು ರಂಗ ಮಂಟಪ, ಧ್ವಜಸ್ತಂಭ, ಒಳಾಂಗಣ, ಹೊರಾಂಗಣ ಹಾಸುಕಲ್ಲು, ದೇವಸ್ಥಾನದ ರಾಜಗೋಪುರ ಕಾಮಗಾರಿಗಳು ಮುಗಿಯುವ ಹಂತಕ್ಕೆ ಬಂದಿದೆ. ಕೋವಿಡ್ ಕಾರಣದಿಂದ ಜೀರ್ಣೋದ್ಧಾರ ಕಾರ್ಯ ಕುಂಠಿತಗೊಂಡಿದ್ದು, ದಾನಿಗಳ ಹಾಗೂ ಭಕ್ತರ ಸಹಾಯಹಸ್ತವನ್ನು ಎದುರು ನೋಡುತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ನವೀನ್ ಶೆಟ್ಟಿ, ಕೆ.ಗುರುರಾಜ್ ಉಪಾಧ್ಯಾಯ, ನಾರಾಯಣ ಭಟ್, ನಾಗೇಶ್ ಭ್, ದಿನೇಶ್ ಬೀಡು ಉಪಸ್ಥಿತರಿದ್ದರು.