ಉಡುಪಿ ನಗರಸಭೆ ಬಜೆಟ್ನಲ್ಲಿ ಮೂಲಸೌಕರ್ಯಕ್ಕೆ ಒತ್ತು: ಸುಮಿತ್ರಾ ನಾಯಕ್
![ಉಡುಪಿ ನಗರಸಭೆ ಬಜೆಟ್ನಲ್ಲಿ ಮೂಲಸೌಕರ್ಯಕ್ಕೆ ಒತ್ತು: ಸುಮಿತ್ರಾ ನಾಯಕ್ ಉಡುಪಿ ನಗರಸಭೆ ಬಜೆಟ್ನಲ್ಲಿ ಮೂಲಸೌಕರ್ಯಕ್ಕೆ ಒತ್ತು: ಸುಮಿತ್ರಾ ನಾಯಕ್](https://www.varthabharati.in/sites/default/files/images/articles/2022/03/10/327619-1646923404.jpg)
ಉಡುಪಿ, ಮಾ.10: ಉಡುಪಿ ನಗರಸಭೆಯ ಈ ಬಾರಿಯ ಬಜೆಟ್ನಲ್ಲಿ ನಗರದ ಒಳಚರಂಡಿ, ಸ್ವಚ್ಛತೆ, ಕುಡಿ ಯುವ ನೀರು, ಬಸ್ ನಿಲ್ದಾಣ, ಉದ್ಯಾನ ವನ ಸೇರಿದಂತೆ ಹಸುರೀಕರಣಕ್ಕೆ ವಿಶೇಷ ಒತ್ತು ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ತಿಳಿಸಿದ್ದಾರೆ.
ಉಡುಪಿ ನಗರಸಭೆಯಲ್ಲಿ ಗುರುವಾರ ನಡೆದ ನಗರಸಭೆ ಬಜೆಟ್ ಕುರಿತ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಾರ್ವಜನಿಕರ ಸಲಹೆಗಳನ್ನು ಪರಿಗಣಿಸಿ ನಗರದ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಮತ್ತು ಅಭಿವೃದ್ಧಿ ಹಿನ್ನೆಲೆಯಲ್ಲಿ ದೂರದೃಷ್ಟಿ ಬಜೆಟ್ ಮಂಡಿಸಲಾಗುವುದು ಎಂದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಎಂಎಸ್ಎಂಇ ಉದ್ಯಮ ನೋಂದಣಿ ಮಾಡಿಕೊಂಡವರಿಗೆ ಸರಕಾರ ಶುಲ್ಕ ಇಲ್ಲದೆ ಅನುಮತಿ ನೀಡಬೇಕೆಂಬ ಮಾರ್ಗಸೂಚಿ ಹೊರಡಿಸಿದೆ. ಈ ಶುಲ್ಕ ರದ್ದು ಮಾಡಬೇಕು ಅಥವಾ ತೀರ ಕಡಿಮೆ ದರದಲ್ಲಿ ಶುಲ್ಕ ತೆಗೆದು ಕೊಳ್ಳಬೇಕು. ನಗರದ ಗೂಡಂಗಡಿಗಳ ಕಾರ್ಯ ನಿರ್ವಹಣೆಗೆ ಸ್ಪಷ್ಟ ನಿಯಮಾ ವಳಿ ರೂಪಿಸಬೇಕು ಎಂದು ಮನವಿ ಮಾಡಿದರು.
ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ನಗರದಲ್ಲಿ ಒಳಚರಂಡಿ ವ್ಯವಸ್ಥಿತ ನಿರ್ಮಾಣವಾಗಲು ಗರಿಷ್ಠ ಅನುದಾನ ಮೀಸಲಿಡಬೇಕು. ಹೊಸ ಮನೆ ಕಟ್ಟಲು ಬಡವರಿಗೆ 25 ಸಾವಿರ ರೂ, ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟ್ಯಾಪ್ ವಿತರಣೆಗೆ ಅನುದಾನವನ್ನು ಬಜೆಟ್ಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಹಿರಿಯರಾದ ಎಸ್.ಎಸ್.ತೋನ್ಸೆ, ವೆಂಕಟರಮಣ ಶೆಣೈ, ಪುಟ್ಟಣ್ಣ ಭಟ್ ಕುಂಜಿತ್ತಾಯ, ಪಾದಚಾರಿ ಮಾರ್ಗಕ್ಕೆ ತಡೆಬೇಲಿ, ಪಾದಚಾರಿ ಮಾರ್ಗವನ್ನು ಜನರ ಬಳಕೆಗೆ ಮಾತ್ರ ಸಿಮಿತವಾಗಿರಿಸುವುದು. ಮಳೆ ನೀರು ತೋಡು ಅಸಮರ್ಪಕ ಕಾಮಗಾರಿ, ರಸ್ತೆ ನಿರ್ಮಾಣ, ಅಜ್ಜರಕಾಡು ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಾಣ, ಬೀದಿನಾಯಿಗಳು ಮತ್ತು ಬೆಕ್ಕುಗಳ ಸಮಸ್ಯೆ ಬಗ್ಗೆ ಗಮನ ಸೆಳೆದರು.
ಸದಸ್ಯರಾದ ಸುಂದರ ಕಲ್ಮಾಡಿ, ದೇವದಾಸ್ ಶೆಟ್ಟಿಗಾರ್, ವಿಜಯಲಕ್ಷ್ಮೀ ಅಗತ್ಯ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಪೌರಾಯುಕ್ತ ಡಾ.ಉದಯ ಶೆಟ್ಟಿ, ಲೆಕ್ಕ ಅಧೀಕ್ಷಕಿ ಗಾಯತ್ರಿ ಉಪಸ್ಥಿತರಿದ್ದರು.
ಸಭೆಗೆ ನಾಗರಿಕರ ನಿರುತ್ಸಾಹ!
ಬಜೆಟ್ ಸಮಾಲೋಚನಾ ಸಭೆಯಲ್ಲಿ ಬೆರಳಿಕೆಯಷ್ಟು ಹಿರಿಯ ನಾಗರಿಕರು ಮಾತ್ರ ಪಾಲ್ಗೊಂಡಿರುವುದು ನಗರದ ಪ್ರಜ್ಞಾವಂತ ಜನರ ನಿರುತ್ಸಾಹವನ್ನು ತೋರಿಸಿತು.
ಸಭೆಯಲ್ಲಿ ಕೇವಲ ಐದಾರು ಮಂದಿ ಹಿರಿಯ ನಾಗರಿಕರು ಹೊರತು ಪಡಿಸಿದರೆ, ನಗರಸಭೆ ಸದಸ್ಯರು ಮಾತ್ರ ಭಾಗವಹಿಸಿದರು. ನಗರಸಭೆಗೆ ಬಜೆಟ್ ಮಂಡಿಸಲು ಬೇಕಾದ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕಾದ ಪ್ರಜ್ಞಾವಂತ ನಾಗರಿಕರು ಗೈರು ಹಾಜರಾಗಿರುವುದು ಎದ್ದು ಕಾಣುತ್ತಿದ್ದವು.