ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಮಾ.10: ಪಂಚರಾಜ್ಯಗಳ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ, ಈ ಬಗ್ಗೆ ನಮ್ಮ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುತ್ತದೆ. ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ ಎನ್ನುವುದು ಈ ಫಲಿತಾಂಶದಲ್ಲಿ ಸ್ಪಷ್ಟವಾಗುತ್ತಿದೆ. ಇದು ಬಹಳ ಕಳವಳಕಾರಿ ಬೆಳವಣಿಗೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಸಿದ್ಧಾಂತವಾಗಿ ನಂಬಿರುವ ಪಕ್ಷ. ಈ ಸಿದ್ಧಾಂತದ ಆಧಾರದಲ್ಲಿಯೇ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇವೆ. ಪ್ರತಿಯೊಂದು ರಾಜ್ಯದ ರಾಜಕಾರಣ ಮತ್ತೊಂದು ರಾಜ್ಯದ ರಾಜಕಾರಣಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ನಮ್ಮ ಪಕ್ಷದ ಸಂಘಟನೆ ಸ್ವಲ್ಪ ದುರ್ಬಲವಾಗಿದೆ. ಅಲ್ಲಿ ಜನತೆಯ ಬೆಂಬಲ ಇದೆ. ಆ ಬೆಂಬಲವನ್ನು ಮತಗಳನ್ನಾಗಿ ಪರಿವರ್ತಿಸುವ ಸಂಘಟನೆ ಕೊರತೆ ಇದೆ. ಅದನ್ನು ಸರಿಪಡಿಸಬೇಕು ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ನಮಗೆ ಜನರ ಬೆಂಬಲವೂ ಇದೆ. ಅದನ್ನು ಮತಗಳನ್ನಾಗಿ ಪರಿವರ್ತಿಸುವ ಪಕ್ಷದ ಸಂಘಟನೆಯೂ ಬಲವಾಗಿದೆ. ನಮ್ಮ ಹಿಂದಿನ ಸರಕಾರದ ಸಾಧನೆ ಕೂಡಾ ಜನರ ಮುಂದಿದೆ. ಆದುದರಿಂದ, ಐದು ರಾಜ್ಯಗಳ ಚುನಾವಣೆ ನಮ್ಮ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.





