ಪುತ್ತೂರು: ಕೊರಗರ ಕುಂದುಕೊರತೆಗಳ ಸಭೆ

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಒಳತ್ತಡ್ಕ ಕೊರಗರ ಕಾಲೊನಿಯಲ್ಲಿ ಗುರುವಾರ ತಹಸೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಆದಿವಾಸಿ ಕೊರಗ ಸಮುದಾಯದ ಕುಂದುಕೊರತೆಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ ಕೊರಗರ ಮೂಲಭೂತ ಸಮಸ್ಯೆಯಾಗಿರುವ ಕುಡಿಯುವ ನೀರು, ಆರೋಗ್ಯ, ಪಡಿತರ ಚೀಟಿ, ಜಮೀನು ಹಕ್ಕು ಪತ್ರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಕೊರಗ ಸಮುದಾಯದ ಮುಖಂಡರಾದ ಯು. ತನಿಯ, ಸುರೇಶ್ ಕೊರಗ ಮತ್ತಿತರರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ತಹಸೀಲ್ದಾರ್ ಟಿ. ರಮೇಶ್ ಬಾಬು ಅವರು ಒಳತ್ತಡ್ಕ ಕೊರಗರ ಕಾಲನಿಯಲ್ಲಿ 12 ಕುಟುಂಬಗಳು ವಾಸವಾಗಿದೆ. ಇಲ್ಲಿನ ಕೊರಗ ಸಮುದಾಯದವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರು ಮತ್ತು ಕೃಷಿ ಭೂಮಿಯ ಬಗ್ಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಇಲ್ಲಿನ ಕೆಲವು ಮಕ್ಕಳು ಅರ್ಧದಲ್ಲಿ ಶಾಲೆ ಬಿಟ್ಟವರಿದ್ದು ಅವರನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸುವ ಬಗ್ಗೆ ಸೂಚನೆ ನೀಡಲಾಗಿದೆ. ಇದಕ್ಕೆ ಪೋಷಕರು ಒಪ್ಪಿಗೆ ನೀಡಿದ್ದಾರೆ. ಅಲ್ಲದೆ ಇಲ್ಲಿನ ಎಲ್ಲಾ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಭಾರತಿ ಜೆ ಅವರು ಕೊರಗರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಹಾಗೂ ಸರ್ಕಾರದಿಂದ ಕೊರಗ ಸಮುದಾಯಕ್ಕೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ಕಂದಾಯ ನಿರೀಕ್ಷಕ ಕೆ.ಟಿ. ಗೋಪಾಲ್, ಆರ್ಯಾಪು ಗ್ರಾಪಂ ಕಾರ್ಯದರ್ಶಿ ಮೋನಪ್ಪ, ಗ್ರಾಮಕರಣಿಕ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಅಣ್ಣಪೂರ್ಣ, ಕೃಷ್ಣ, ಪಂಚಾಯತ್ ಸಿಬ್ಬಂದಿ ಅಣ್ಣಪ್ಪ, ಪುತ್ತೂರು ತಾಲೂಕು ಕೊರಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಬಾಬು ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.







