ದೇಶದಲ್ಲಿ ಡಿಜಿಟಲ್ ಶಿಕ್ಷಣದ ಹೊಸ ಯುಗ ಆರಂಭ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ

ಬೆಳಗಾವಿ, ಮಾ.10: ಕೊರೋನ ಹಿನ್ನೆಲೆಯಲ್ಲಿ ದೇಶದಲ್ಲಿ ಡಿಜಿಟಲ್ ಶಿಕ್ಷಣದ ಹೊಸ ಯುಗ ಆರಂಭವಾಗಿದೆ. ಡಿಜಿಟಲ್ ಕ್ಷೇತ್ರದಲ್ಲಿ ಬಹಳಷ್ಟು ಸವಾಲುಗಳಿವೆ. ಇದರ ಮಧ್ಯೆಯೇ ಇವುಗಳನ್ನು ಮೀರಿ ಭಾರತವು ಡಿಜಿಟಲ್ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು ಜಗತ್ತಿನಲ್ಲಿ ವಿಶಿಷ್ಟ ಕೀರ್ತಿಗೆ ಪಾತ್ರವಾಗಿದೆ ಎಂದು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.
ಗುರುವಾರ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಸಭಾಂಗಣದಲ್ಲಿ ನಡೆದ ವಿಟಿಯು 21ನೆ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನ ಹಲವು ದೇಶಗಳಲ್ಲಿ ಡಿಜಿಟಲ್, ಐಟಿ, ಮಾಹಿತಿ-ತಂತ್ರಜ್ಞಾನದ ಬೆಳವಣಿಗೆಯಲ್ಲಿ ಕರ್ನಾಟಕದ ಯುವ ಸಮುದಾಯದ ಕೊಡುಗೆ ದೊಡ್ಡದಾಗಿದೆ. ಡಿಜಿಟಲ್ ಕ್ಷೇತ್ರದಲ್ಲಿ ಭಾರತವು ಇಡೀ ಜಗತ್ತಿನಲ್ಲಿ ಅತ್ಯುತ್ತಮ ಸಾಧನೆಗೈದಿದೆ. ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದರು.
ದೇಶದ ನವನಿರ್ಮಾಣಕ್ಕೆ ಕೊಡುಗೆ ನೀಡಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ಪ್ರತಿಷ್ಠಿತ ವಿಟಿಯು ಘಟಿಕೋತ್ಸವದಲ್ಲಿ ಭಾಗವಹಿಸಿರುವುದಕ್ಕೆ ಸಂತಸವಾಗಿದೆ. ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳ ಜೀವನದಲ್ಲಿ ಇದು ಅವಿಸ್ಮರಣೀಯ ದಿನವಾಗಿದೆ. ಅತ್ಯುತ್ತಮ ಸಾಧನೆಗೈದು ಸುವರ್ಣ ಪದಕ ಹಾಗೂ ರ್ಯಾಂಕ್ ಗಳಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇದು ಅವರಿಗೆ ಕಲಿಸಿದ ಗುರುಗಳಿಗೂ ಅವಿಸ್ಮರಣೀಯ ದಿನ ಎಂದರು.
ಜ್ಞಾನದ ಆಧಾರದ ಮೇಲೆ ಬದುಕಿನ ದಾರಿ ಕಂಡುಕೊಳ್ಳಬೇಕು. ಪದವಿ ಪಡೆಯುವ ಮೂಲಕ ಬದುಕಿನ ಹೊಸ ಅಧ್ಯಾಯ ಆರಂಭವಾದಂತಾಗಿದೆ. ವಿದ್ಯಾರ್ಥಿಗಳು ಗಳಿಸಿದ ಪದವಿ ಮತ್ತು ಜ್ಞಾನವನ್ನು ರಾಷ್ಟಕ್ಕೆ ಸಮರ್ಪಿಸಬೇಕಿದೆ. ಶಿಸ್ತು, ಉತ್ಸಾಹ ಹಾಗೂ ನೈತಿಕತೆಯ ಮೂಲಕ ಹೊಸತನ ಮತ್ತು ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು. ಮಾತೃಭಾಷೆ ಕನ್ನಡದಲ್ಲೂ ತಾಂತ್ರಿಕ ಶಿಕ್ಷಣ ಪಡೆಯುವ ಅವಕಾಶವನ್ನು ಸರಕಾರ ಕಲ್ಪಿಸಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸಲಹೆ ನೀಡಿದರು.
ಪದವಿ ಪ್ರದಾನ: ವಿಟಿಯು 21ನೆ ಘಟಿಕೋತ್ಸವದಲ್ಲಿ 66,141 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕುಲಪತಿ ಪ್ರೊ.ಕರಿಸಿದ್ದಪ್ಪ, ಕುಲಸಚಿವ ಪ್ರೊ.ಎ.ಎಸ್.ದೇಶಪಾಂಡೆ, ಪ್ರೊ.ಬಿ.ಈ.ರಂಗಸ್ವಾಮಿ, ವಿಟಿಯು ಕಾರ್ಯಕಾರಿ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.








