ಆಸ್ತಿ ವಿಚಾರಕ್ಕೆ ಜಗಳ: ತಂದೆಯಿಂದಲೇ ಮಗನ ಮೇಲೆ ಮಾರಣಾಂತಿಕ ಹಲ್ಲೆ; ಪ್ರಕರಣ ದಾಖಲು

ಮಂಡ್ಯ, ಮಾ.11: ಆಸ್ತಿ ಪಾಲು ವಿಚಾರವಾಗಿ ತಂದೆಯೇ ಮಗನ ಕೈಕಾಲುಗಳನ್ನು ಹಗ್ಗದಿಂದ ಬಿಗಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಪಾಂಡವಪುರ ತಾಲೂಕು ಎರೇಗೌಡನಹಳ್ಳಿಯಲ್ಲಿ ನಡೆದಿದೆ.
ನಾಗೇಶ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಆತನ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನ ತಂದೆ, ಸಹೋದರನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಬೇರೆ ಮನೆಯಲ್ಲಿ ವಾಸವಿದ್ದ ನಾಗೇಶ್, ತನ್ನ ತಂದೆಯ ಮನೆಗೆ ತೆರಳಿ ಆಸ್ತಿಯಲ್ಲಿ ಪಾಲು ಕೇಳಿದಾಗ ವಾಗ್ವಾದ ನಡೆದಿದೆ. ಈ ಸಂದರ್ಭ ಆತನ ತಂದೆ ಮಹದೇವೇಗೌಡ ಮತ್ತು ಸಹೋದರ ನಂಜುಂಡೇಗೌಡ ನಾಗೇಶನನ್ನು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ತಂದೆಯ ಮನೆಗೆ ಹೋದ ಪತಿ ವಾಪಸ್ಸು ಬಾರದಿದ್ದಾಗ ಆತಂಕಗೊಂಡ ಆತನ ಪತ್ನಿ ತಂದೆಯ ಮನೆಗೆ ಹೋಗಿ ವಿಚಾರಿಸಿದಾಗ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ತಿಳಿದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ನಾಗೇಶನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪಾಂಡವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





