ಚಿಕ್ಕಮಗಳೂರು: ಕೃಷಿ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ಮಾ.21ರಿಂದ ಬೆಂಗಳೂರು ಚಲೋ ಚಳವಳಿ; ರೈತ ಸಂಘ
ಚಿಕ್ಕಮಗಳೂರು, ಮಾ.11: ರಾಜ್ಯ ಸರಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ಆಗ್ರಹಿಸಿ ರೈತ ಸಂಘದಿಂದ ಮಾ.21ರಿಂದ 23ರವರೆಗೆ ಬೆಂಗಳೂರು ಚಲೋ ಮತ್ತು ಪರ್ಯಾಯ ಜನಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಅಧಿವೇಶನ ಮತ್ತು ಮಾ.22 ಮತ್ತು 23ರಂದು ಪರ್ಯಾಯ ಜನಾಧಿವೇಶನವನ್ನು ಆಯೋಜಿಸಲಾಗಿದೆ. ಈ ಅಧಿವೇಶನದಲ್ಲಿ ಜಿಲ್ಲೆಯ ರೈತರು, ದಲಿತ ಪ್ರಗತಿಪರರು, ಕಾರ್ಮಿಕರು, ಮಹಿಳೆಯರು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಕೇಂದ್ರ ಸರಕಾರ ಜಾರಿ ಮಾಡಿದ್ದ ಮೂರು ಕೃಷಿ ತಿದ್ದುಪಡಿ ಮಸೂದೆಗಳ ವಿರುದ್ಧ ದಿಲ್ಲಿಯಲ್ಲಿ ರೈತರು 1 ವರ್ಷದ ಕಾಲ ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರಕಾರ ಕೃಷಿ ತಿದ್ದುಪಡಿ ಕಾಯ್ದೆಗಳ ಜಾರಿಯನ್ನು ಹಿಂಪಡೆದುಕೊಂಡಿದೆ. ಆದರೆ, ರಾಜ್ಯ ಸರಕಾರ ಎಂಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಯಂತಹ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದ್ದು, ಸರಕಾರ ಈ ತಿದ್ದುಪಡಿ ಕಾಯ್ದೆಗಳನ್ನು ಇದುವರೆಗೂ ಹಿಂಪಡೆದುಕೊಂಡಿಲ್ಲ. ಈ ಕಾಯ್ದೆಗಳು ರೈತ ಹಾಗೂ ಜನವಿರೋಧಿ ಕಾಯ್ದೆಗಳಾಗಿದ್ದು, ಇವುಗಳನ್ನು ಹಿಂಪಡೆಯಲು ಆಗ್ರಹಿಸಿ ವಿವಿಧ ಸಂಘಟನೆಗಳ ಐಕ್ಯ ವೇದಿಕೆ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ಹಿಂದೆ ರೈತರಿಗೆ ಅನುಕೂಲವಾಗುವ ಕಾಯ್ದೆಗಳನ್ನು ತರುವಂತೆ ಹೋರಾಟ ಮಾಡಲಾಗುತ್ತಿತ್ತು, ಆದರೆ ಇಂದು ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಹೋರಾಟ ಮಾಡುವ ಸ್ಥಿತಿ ಬಂದಿರುವುದು ಶೋಚನೀಯ ಎಂದು ವಿಷಾದಿಸಿದರು.
ಎಪಿಎಂಸಿ ಕಾಯ್ದೆಯಿಂದ ಎಪಿಎಂಸಿಗಳು ಬಾಗಿಲು ಮುಚ್ಚುತ್ತಿದ್ದು, ಖಾಸಗಿ ಮಾರುಕಟ್ಟೆಗಳು ತಲೆ ಎತ್ತುತ್ತಿವೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದ ರೈತರು ಅನುಪಯುಕ್ತ ಜಾನುವಾರುಗಳನ್ನು ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಭೂ ಸುಧಾರಣಾ ಕಾಯ್ದೆಯಿಂದ ಸಣ್ಣ ಸಣ್ಣ ಹಿಡುವಳಿದಾರರ ಕೃಷಿ ಜಮೀನುಗಳು ಶ್ರೀಮಂತ ಬಂಡವಾಳಶಾಹಿಗಳ ಪಾಲಾಗುತ್ತಿವೆ ಎಂದ ಅವರು, ಒಟ್ಟಾರೆ ರಾಜ್ಯ ಸರಕಾರ ಜಾರಿಗೆ ತಂದಿರುವ ಈ ರೈತ ವಿರೋಧಿ ಕಾಯ್ದೆಗಳಿಂದಾಗಿ ರಾಜ್ಯಾದ್ಯಂತ ರೈತರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರ ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರು ಬೆಳೆಯುವ ಭತ್ತ, ರಾಗಿ, ಜೋಳ, ಎಣ್ಣೆಕಾಳು, ತೊಗರಿ ಇತರೆ ಧವಸ ಧಾನ್ಯಗಳ ಖರೀದಿಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಕಾನೂನು ಜಾರಿ ಮಾಡಬೇಕು ಎಂದರು.
ರೈತ ಸಂಘದ ವನಶ್ರೀ ಲಕ್ಷ್ಮಣ್ಗೌಡ ಮಾತನಾಡಿ, ಜಿಲ್ಲಾದ್ಯಂತ ರೈತರ ಜಮೀನಿನ ಆರ್ಟಿಸಿಯಲ್ಲಿ ಬೆಳೆ ಕಾಲಂ ನಮೂದಿಸದಿರುವುದರಿಂದ ರೈತರು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಆರ್ಟಿಸಿಯಲ್ಲಿ ಬೆಳೆ ಕಾಲಂ ನಮೂದಿಸಬೇಕು. ಅತೀವೃಷ್ಟಿ ಪರಿಹಾರ ನೈಜ ಫಲಾನುಭವಿಗಳಿಗೆ ತಲುಪಿಲ್ಲವಾಗಿದ್ದು, ಬೆಳೆ ಕಳೆದುಕೊಂಡ ಎಲ್ಲರಿಗೂ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ನಿಲುಗಡೆಯಿಂದಾಗಿ ಕಾಫಿ ಬೆಳೆಗಾರರು ಹಾಗೂ ರೈತರು ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದ್ದು ಕೂಡಲೇ ಸರಕಾರ 3ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಮತ್ತು 10ಎಚ್.ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ವಿನಾಯಕ್, ಜಿಲ್ಲಾ ಮುಖಂಡರಾದ ಲೋಕೇಶ್, ಬಸವರಾಜಪ್ಪ ಉಪಸ್ಥಿತರಿದ್ದರು.







