ಮಂಗಳೂರು; ಅಪಾಯಕಾರಿ ರೀತಿಯಲ್ಲಿ ಬೈಕ್ ಸ್ಟಂಟ್: 8 ಮಂದಿ ಪೊಲೀಸ್ ವಶಕ್ಕೆ

ಮಂಗಳೂರು : ರಸ್ತೆಗಳಲ್ಲಿ ಸ್ಟಂಟ್ ಮಾಡಿಕೊಂಡು ಬೈಕ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 8 ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ತೌಸಿಫ್ ಮಹಮ್ಮದ್, ಮಹಮ್ಮದ್ ಸಫ್ವಾನ್, ಮಹಮ್ಮದ್ ಅನೀಸ್, ಮಹಮ್ಮದ್ ಸೊಹಾಲಿ, ಅಬೂಬಕ್ಕರ್ ಸಿದ್ಧಿಕ್, ಕಿಶನ್ ಕುಮಾರ್, ಇಲ್ಯಾಸ್, ಶರೀಫ್ ಎಂಬ ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಐದು ಬೈಕ್ಗಳನ್ನೂ ಕೂಡಾ ವಶಪಡಿಸಿಕೊಂಡಿದ್ದಾರೆ.
ಅಪಾಯಕಾರಿ ಬೈಕ್ ಸ್ಟಂಟ್ಗೆ ಸಂಬಂಧಿಸಿ ನಾಲ್ಕು ಪ್ರಕರಣ ದಾಖಲಾಗಿದ್ದು, ಬೈಕ್ ಸ್ಟಂಟ್ಗಾಗಿಯೇ ಈ ಯುವಕರು ವಾಟ್ಸಾಪ್ ಗ್ರೂಪ್ ಕೂಡಾ ರಚಿಸಿದ್ದು, ಆ ಗ್ರೂಪ್ನಲ್ಲಿ ಮತ್ತಷ್ಟು ಅಪಾಯಕಾರಿ ಬೈಕ್ ಸ್ಟಂಟ್ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಸ್ಟಂಟ್, ರೇಸ್ ಮಾಡಿದರೆ ಜೋಕೆ: ಬೀಳುತ್ತೆ ಕೇಸ್!
ನಗರದಲ್ಲಿ ವೀಕೆಂಡ್ ಸೇರಿದಂತೆ ಇತರ ದಿನಗಳಲ್ಲಿ ಜನ ಸಂಚಾರ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ರೇಸಿಂಗ್, ಸ್ಟಂಟ್ ಮಾಡಿರುವುದು ಕಂಡು ಬಂದಿತ್ತು. ಈ ಬಗ್ಗೆ ದೂರು ನೀಡಿದವರಲ್ಲಿಯೂ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಜತೆಗೆ ಸಾಮಾಜಿಕ ಜಾಲತಾಣಗಳನ್ನು ನಿಗಾ ವಹಿಸುವ ಘಟಕಕ್ಕೂ ಕೆಲವೊಂದು ಕೀ ವರ್ಡ್ಗಳ ಮೂಲಕ ಇನ್ಸ್ಟ್ರಾಂಗ್ಗಳಲ್ಲಿ ಇಂತಹ ಸ್ಟಂಟ್ಗಳನ್ನು ಅಪ್ಲೋಡ್ ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಸಾಫ್ಟ್ವೇರ್ ಮೂಲಕ ಪರಿಶೀಲನೆ ನಡೆಸಿ ಹಲವಾರು ವೀಡಿಯೋಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರು ಕೇಂದ್ರಿ ಜಾಗ, ರಿಜಿಸ್ಟೇಶನ್ ನಂಬರ್, ರಸ್ತೆಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಅಪಾಯಕಾರಿ ವಾಹನ ಚಾಲನೆ, ಸಾರ್ವಜನಿಕ ರಸ್ತೆಗಳಲ್ಲಿ ಸರಕಾರದ ಅನುಮತಿ ಇಲ್ಲದೆ ರೇಸ್ ರೀತಿಯಲ್ಲಿ ಓಡಿಸುವಂತಿಲ್ಲ. ಆ ನಿಟ್ಟಿನಲ್ಲಿ ಈ ಪ್ರಕರಣ ದಾಖಲಾಗಿದೆ. ಇನ್ನಷ್ಟು ಸಾಕಷ್ಟು ವೀಡಿಯೋಗಳನ್ನು ನಮ್ಮ ಸಾಮಾಜಿಕ ಜಾಲತಾಣ ಘಟಕ ನಿಗಾ ವಹಿಸುತ್ತಿದೆ. ರಸ್ತೆಗಳಲ್ಲಿ ಮಕ್ಕಳು, ಹಿರಿಯ ನಾಗರಿಕರು ಓಡಾಡುತ್ತಿರುವ ಸಂದರ್ಭದಲ್ಲಿ ಅಪಾಯಕಾರಿ, ಬೈಕ್ ರೇಸ್ ಮಾಡಿಕೊಂಡು ಕರ್ಕಶವಾಗಿ ಚಲಾಯಿಸುವುದರಿಂದ ಇತರರಿಗೆ ತೊಂದರೆಯಾಗುತ್ತದೆ. ಹಾಗಾಗಿ ಪೊಲೀಸ್ ಇಲಾಖೆ ಈ ಬಗ್ಗೆ ನಿಗಾ ವಹಿಸಿದೆ. ಈಗಾಗಲೇ ಸುಮಾರು 30ಕ್ಕೂ ಅಧಿಕ ವೀಡಿಯೋಗಳು ದೊರಕಿದ್ದು, ಅದರಲ್ಲಿ ಸುಮಾರು 40ಕ್ಕೂ ಅಧಿಕ ಇಂತಹ ಅಪಾಯಕಾರಿ ರೀತಿಯಲ್ಲಿ ಸ್ಟಂಟ್ ರೇಸ್ ಮಾಡುವಂತಹ ವಾಹನಗಳನ್ನು ಗುರುತಿಸಲಾಗಿದೆ. ಸ್ಟಂಟ್ ಮಾಡುವವರ ಜತೆ ಅದನ್ನು ಫಾಲೋ ಮಾಡಿಕೊಂಡು ವೀಡಿಯೋ ಮಾಡುವುದು ಕೂಡಾ ಅಪಾಯಕಾರಿ ಹಾಗೂ ತಪ್ಪು. ಈ ಬಗ್ಗೆ ಸಾರ್ವಜನಿಕರು ದೂರು ನೀಡುವ ಜತೆಗೆ ಪೋಷಕರು ಕೂಡಾ ತಮ್ಮ ಮಕ್ಕಳು ವಾಹನವನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ ಎಂಬ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ವೀಕೆಂಡ್ಗಳಲ್ಲಿ ಪಾರ್ಟಿ ಮಾಡಿಕೊಂಡು, ಮದ್ಯ, ಡ್ರಗ್ಸ್ ನಶೆ ಮಾಡಿಕೊಂಡು ಇಂತಹ ಸ್ಟಂಟ್ ಮಾಡುವ ಕೆಲಸ ಮಾಡಿದರೆ ಕಠಿಣ ಕ್ರಮ ವಹಿಸಲಾಗುವುದು. ವಾಹನ ತಪಾಸಣೆ ಸಂದರ್ಭ ವಶಕ್ಕೆ ಪಡೆದಾಗ ವಾದ ಮಾಡುವುದು ಅಥವಾ ಪೊಲೀಸರ ಜತೆ ವಿನಾ ಕಾರಣ ವಾಗ್ವಾದ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕರಣವೂ ದಾಖಲು ಮಾಡುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಪೋಷಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
