ಪಂಚ ರಾಜ್ಯಗಳಲ್ಲಿ ಜನರ ನಾಡಿಮಿಡಿತ ಅರಿಯುವಲ್ಲಿ ನಮ್ಮ ಪಕ್ಷ ವಿಫಲ: ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು, ಮಾ.12: ಪಂಚರಾಜ್ಯ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದ ಮಟ್ಟಿಗೆ ಹಿನ್ನಡೆಯಾದರೂ ಅಂತಿಮವಾಗಿ ಜನಾದೇಶಕ್ಕೆ ಗೌರವ ಕೊಡಲೇಬೇಕು. ಚುನಾವಣೆ ನಡೆದ ಐದೂ ರಾಜ್ಯಗಳಲ್ಲಿ ಪಕ್ಷದ ಪರ ಜನರ ಒಲವಿತ್ತು. ಆದರೆ ಆ ಒಲವು ಪಕ್ಷದ ಪರ ಮತಗಳಾಗಿ ಪರಿವರ್ತನೆಯಾಗಿಲ್ಲ. ಚುನಾವಣೆ ನಡೆದ ರಾಜ್ಯಗಳಲ್ಲಿ ಜನರ ನಾಡಿಮಿಡಿತ ಅರಿಯುವಲ್ಲಿ ನಮ್ಮ ಪಕ್ಷ ವಿಫಲವಾಗಿದೆ ಎಂದು ತಮಿಳುನಾಡು ಹಾಗೂ ಗೋವಾ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮತದಾರನ ಆದ್ಯತೆ ಏನು? ಯಾವುದಕ್ಕೆ ಪ್ರಾಶಸ್ತ್ಯ? ಎಂದು ತೋರಿಸಿಕೊಟ್ಟಿದೆ. ಬಿಜೆಪಿ ಸರಕಾರದ ಆಡಳಿತ ವೈಫಲ್ಯ, ದುಬಾರಿ ಜೀವನ, ರೈತರ ಶೋಷಣೆ ಚುನಾವಣೆಯ ವಸ್ತು ವಿಷಯ ಎಂದು ಭಾವಿಸಲಾಗಿತ್ತು. ಆದರೆ ಜನರಿಗೆ ಈ ವಿಷಯಗಳಿಗಿಂತ ಕೋಮು ಸಂಗತಿಗಳೇ ಆದ್ಯತೆಯಾದಂತಿದೆ. ಈ ಫಲಿತಾಂಶ ಅಪಾಯಕಾರಿ ಬೆಳವಣಿಗೆಯ ಅಪಶಕುನವಿದ್ದಂತೆ ಎಂದು ಹೇಳಿದ್ದಾರೆ.
ನನ್ನ ಉಸ್ತುವಾರಿಯಲ್ಲಿದ್ದ ಗೋವಾದಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯದ ನಿರಾಸೆಯಿದ್ದರೂ ಪಕ್ಷದ ಸಾಧನೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. ಬಿಜೆಪಿಯ ಷಡ್ಯಂತ್ರ ಹಾಗೂ ಕುದುರೆ ವ್ಯಾಪಾರದಿಂದ ಶೂನ್ಯದಲ್ಲಿದ್ದ ಕಾಂಗ್ರೆಸ್ 11 ಸ್ಥಾನಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್ ಫಲಿತಾಂಶ ಪಕ್ಷದ ಮಟ್ಟಿಗೆ ದೊಡ್ಡ ಆಘಾತ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಉತ್ತರಾಖಂಡ್ ಹಾಗೂ ಮಣಿಪುರದಲ್ಲೂ ನಾವು ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲ. ಆದರೆ ಈ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ಕೊರತೆಯೇ ಈ ಫಲಿತಾಂಶಕ್ಕೆ ಕಾರಣ. ಬಿಜೆಪಿ ಸರಕಾರದ ಆಡಳಿತ ವೈಫಲ್ಯವನ್ನು ನಾವು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಎಡವಿದ್ದೇವೆ. ಇದರ ಲಾಭ ಪಡೆದುಕೊಂಡಿರುವ ಬಿಜೆಪಿ ಈ ರಾಜ್ಯಗಳಲ್ಲಿ ಜನಾದೇಶ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶವನ್ನು ನಾನು ಬಿಜೆಪಿಯ ಗೆಲುವು ಅಥವಾ ಕಾಂಗ್ರೆಸ್ನ ಸೋಲು ಎಂದು ವಿಶ್ಲೇಷಿಸಲು ಹೋಗುವುದಿಲ್ಲ. ಈ ಫಲಿತಾಂಶ ಈ ದೇಶದ ಭವಿಷ್ಯದ ಸೋಲು ಎಂದು ಮಾತ್ರ ಹೇಳಬಲ್ಲೆ. ಬಿಜೆಪಿ ಪ್ರತಿಪಾದಿಸುತ್ತಿರುವ ಧರ್ಮಾಧಾರಿತ ಸಂಗತಿಗಳು ತಮ್ಮ ಹೊಟ್ಟೆ ತುಂಬಿಸುವುದಿಲ್ಲ ಎಂಬ ಸತ್ಯ ಮತದಾರನಿಗೆ ಅರಿವಾಗುವವರೆಗೂ ಈ ರೀತಿಯ ಫಲಿತಾಂಶ ನಿರೀಕ್ಷಿತ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.







