ಶಿಬಿರಗಳಿಂದ ಯುವ ಜನತೆಯ ಸದ್ಭಳಕೆ ಸಾಧ್ಯ: ಫಾ.ಮೆಂಡೋನ್ಸಾ

ಉಡುಪಿ, ಮಾ.೧೩: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ೨೦೨೧-೨೨ನೆ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಮಾ.೧೧ರಂದು ಸಗ್ರಿ ನೋಳೆಯ ಉಡುಪಿ ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರಗಿತು.
ಶಿಬಿರವನ್ನು ಉದ್ಘಾಟಿಸಿದ ಮಿಲಾಗ್ರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕ ಅತೀ ವಂ.ಫಾ.ವೆಲೆರಿಯನ್ ಮೆಂಡೋನ್ಸಾ ಮಾತನಾಡಿ, ಯುವ ಜನತೆಯ ಸದ್ಭಳಕೆ ಯಾಗಬೇಕಾದರೆ ಇಂತಹ ಶಿಬಿರಗಳು ಅವಶ್ಯಕ. ಇದರಿಂದ ವಿದ್ಯಾರ್ಥಿಗಳು ಹೊರ ಪ್ರಪಂಚದ ಅನುಭವವನ್ನು ಪಡೆದು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಅಲ್ಲದೆ ವಿದ್ಯಾರ್ಥಿಗಳು ಸಮಾಜ ಸೇವೆಯಿಂದ ಸಮಾಜದ ಜನರ ಪ್ರೀತಿ, ವಾತ್ಸಲ್ಯವನ್ನು ಪಡೆದು ಉನ್ನತಿಯನ್ನು ಸಾಧಿಸಬಹುದು ಎಂದರು.
ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯ ರಘು ರಾವ್, ಮಣಿಪಾಲ ಠಾಣಾ ಎಸ್ಸೈ ರಾಜಶೇಖರ್, ಎಸ್ಡಿಎಂಸಿ ಅಧ್ಯಕ್ಷೆ ಭಾರತಿ, ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಸಂಸ್ಥೆಗಳ ಅಧ್ಯಕ್ಷ ಪ್ರಶಾಂತ್ ಮಾತನಾಡಿದರು.
ರಾಘವೇಂದ್ರ ನಾಯಕ್ ಮತ್ತು ಸದಾನಂದ ನಾಯಕ್ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ಅನುಪಮಾ ಜೋಗಿ ಸ್ವಾಗತಿಸಿ, ಯೋಜನಾಧಿಕಾರಿ ಮೆಲ್ಸನ್ ಡಿಸೋಜ ವಂದಿಸಿದರು. ಶರಣ್ಯಾ ಕಾರ್ಯಕ್ರಮ ನಿರ್ವಹಿಸಿದರು. ಸೇವಾ ಘಟಕದ ವಿದ್ಯಾರ್ಥಿ ನಾಯಕರುಗಳಾದ ಗೌರವ್, ಸಾಕ್ಷಿತ್, ರಾಕೇಶ್, ಸ್ವಾತಿ ಮತ್ತು ಶ್ವೇತಾ ಸಹಕರಿಸಿದರು.