ಶ್ರೀನಗರ ಪತ್ರಕರ್ತ ಫಹದ್ ಶಾ ವಿರುದ್ಧ 37 ದಿನಗಳಲ್ಲಿ ಎರಡನೇ ದೇಶದ್ರೋಹ ಪ್ರಕರಣ ದಾಖಲಿಸಿದ ಪೊಲೀಸರು

ಫಹದ್ ಶಾ (Photo: Twitter/@pzfahad)
ಶ್ರೀನಗರ್: ಶ್ರೀನಗರ ಮೂಲದ ಪತ್ರಕರ್ತ ಹಾಗೂ 'ದಿ ಕಾಶ್ಮೀರ್ ವಾಲಾ' ಸುದ್ದಿ ತಾಣ ಇದರ ಮುಖ್ಯ ಸಂಪಾದಕ ಫಹದ್ ಶಾ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎರಡನೇ ಬಾರಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಫಹದ್ ಅವರನ್ನು ಬಂಧಿಸಿರುವುದು ಇದು ಮೂರನೇ ಬಾರಿಯಾಗಿದೆ. ಈ ಹಿಂದೆ ಎರಡು ಬಾರಿ ಬಂಧನಕ್ಕೊಳಗಾಗಿ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು ಎಂದು thewire.in ವರದಿ ಮಾಡಿದೆ.
ಮಾರ್ಚ್ 5ರಂದು ಫಹದ್ ಅವರಿಗೆ ಅವರ 'ಕಾಶ್ಮಿರ್ ವಾಲ' ಸುದ್ದಿ ತಾಣದ ವಿರುದ್ಧ ಐಪಿಸಿ ಸೆಕ್ಷನ್ 153 ಮತ್ತು 505 ಅನ್ವಯ ದಾಖಲಾದ ಪ್ರಕರಣ ಸಂಬಂಧ ಜಾಮೀನು ದೊರಕಿತ್ತು. ಆದರೆ ಮಾರ್ಚ್ 11ರಂದು ಅವರನ್ನು ಬಂಧಿಸಿ 5 ದಿನಗಳ ರಿಮಾಂಡ್ ವಿಧಿಸಲಾಗಿದೆ ಕಳೆದ 37 ದಿನಗಳ ಅವಧಿಯಲ್ಲಿ ಅವರ ವಿರುದ್ಧ ಯುಎಪಿಎ ಅಡಿ ಇದು ಎರಡನೇ ಪ್ರಕರಣ ಎಂದು ಅವರ ವಕೀಲ ಉಮೈರ್ ರೋಂಗ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಶ್ರೀನಗರದ ನವಾ ಕಡಲ್ ಪ್ರದೇಶದಲ್ಲಿ ಮೇ 19, 2020ರಂದು ನಡೆದ ಎನ್ಕೌಂಟರ್ ಸಂಬಂಧ ಫಹದ್ ಅವರ ಸುದ್ದಿ ತಾಣ ಪ್ರಕಟಿಸಿದ ವರದಿ ಸಂಬಂಧ ಪ್ರಕರಣ ದಾಖಲಾಗಿತ್ತು. ಭದ್ರತಾ ಪಡೆಗಳು ಮನೆಗಳಿಗೆ ಬೆಂಕಿ ಹಚ್ಚಿ ಹಣ ಮತ್ತು ಚಿನ್ನಾಭರಣ ಲೂಟಿಗೈದಿವೆ ಎಂದು ಸ್ಥಳೀಯರು ಆರೋಪಿಸಿದ್ದರೆ ಅಧಿಕಾರಿಗಳು ಈ ಆರೋಪ ನಿರಾಕರಿಸಿದ್ದರು. ಎರಡೂ ಕಡೆಗಳ ಹೇಳಿಕೆಗಳನ್ನು 'ಕಾಶ್ಮೀರ ವಾಲಾ' ಸಹಿತ ಹಲವು ಇತರ ಮಾಧ್ಯಮಗಳು ವರದಿ ಮಾಡಿವೆ.
ಈ ಸಂಬಂಧ ಫಹದ್ ಅವರಿಗೆ ಮೂರು ಬಾರಿ ಸಮನ್ಸ್ ಜಾರಿಯಾಗಿತ್ತು ಹಾಗೂ ಪ್ರತಿಬಾರಿಯೂ ಅವರು ತನಿಖೆಗೆ ಸಹರಿಸಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.
ಫೆಬ್ರವರಿ 4ರಂದು ಪುಲ್ವಾಮ ಜಿಲ್ಲೆಯಲ್ಲಿ ಮೂವರು ಶಂಕಿತ ಉಗ್ರರು ಹಾಗೂ ಒಬ್ಬ ಹದಿಹರೆಯದ ಬಾಲಕ ವಿವಾದಿತ ಎನ್ಕೌಂಟರ್ ನಲ್ಲಿ ಮೃತಪಟ್ಟ ಪ್ರಕರಣದ ವರದಿಗಾಗಿ ಕಾಶ್ಮಿರ್ ವಾಲ ವಿರುದ್ಧ ಮೊದಲ ಬಾರಿ ದೇಶದ್ರೋಹದ ಪ್ರಕರಣ ಫೆಬ್ರವರಿ 4ರಂದು ದಾಖಲಿಸಲಾಗಿತ್ತು. ಮೃತ ಬಾಲಕ ಒಬ್ಬ ಉಗ್ರನಾಗಿದ್ದ ಎಂದು ಪೊಲೀಸರು ಹೇಳಿದ್ದರೆ ಬಾಲಕನ ಕುಟುಂಬ ಮಾತ್ರ ಆತ ನಿರಪರಾಧಿ ಎಂದು ವಾದಿಸಿತ್ತು. ಇದನ್ನು ವರದಿ ಮಾಡಿದ್ದಕ್ಕಾಗಿ 'ಉಗ್ರವಾದವನ್ನು ವೈಭವೀಖರಿಸುತ್ತಿದ್ದಾರೆ' ಎಂದು ಫಹದ್ ವಿರುದ್ದ ಎಫ್ಐಆರ್ ದಾಖಲಾಗಿತ್ತು ಎಂದು ವರದಿಯಾಗಿದೆ.
ಅಮೆರಿಕಾದ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟಸ್, ಫ್ರೀ ಸ್ಪೀಚ್ ಕಲೆಕ್ಟಿವ್ ಸಹಿತ ಹಲವು ಸಂಘಟನೆಗಳು ಮತ್ತು ವ್ಯಕ್ತಿಗಳು ಫಹದ್ ಅವರಿಗೆ ಬೆಂಬಲವಾಗಿ ನಿಂತಿದ್ದಾರಲ್ಲದೆ ಅವರ ಬಿಡುಗಡೆಗೆ ಆಗ್ರಹಿಸಿದ್ದಾರೆ.







