ಅಹಿಂಸೆ, ಶಾಂತಿ ಸಂದೇಶ ಸಾರಲು ರಾಜ್ಯಪಾಲರು ಕರೆ

ಮೂಡುಬಿದಿರೆ : ವಿಶ್ವಕ್ಕೆ ಶಾಂತಿ ಹಾಗೂ ಅಹಿಂಸೆಯ ಸಂದೇಶ ಸಾರಿದ ಭಾರತದ ಕೀರ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ಮೂಡುಬಿದಿರೆಯ 18 ಜೈನ ದೇವಾಲಯಗಳಲ್ಲಿ ಪ್ರಮುಖವಾದ ಸಾವಿರ ಕಂಬಗಳ ಬಸದಿಯಾದ ತ್ರಿಭುವನ ತಿಲಕ ಚೂಡಾಮಣಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ನಮ್ಮ ದೇಶ ಮಾನವೀಯ ಮೌಲ್ಯಗಳು, ಶಾಂತಿ, ಅಹಿಂಸೆಯ ಮಹತ್ವ ಮತ್ತು ಸಹೋದರತ್ವವನ್ನು ಇಡೀ ಜಗತ್ತಿಗೆ ತೋರಿಸಿದೆ. ಭಾರತದ ಸಂಸ್ಕೃತಿ ವಿಶ್ವಕ್ಕೆ ಪ್ರೇರಣೆ ನೀಡಿದೆ. ಭಾರತ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸೇವೆಗೆ ಸ್ಫೂರ್ತಿಯನ್ನು ನಿರಂತರವಾಗಿ ನೀಡಲಿದೆ ಎಂಬ ಭರವಸೆ ಇದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಈ ಸಂದರ್ಭ ಜೈನ ಮಠದ ಸ್ವಸ್ತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರಾಜ್ಯಪಾಲರನ್ನು ಸನ್ಮಾನಿಸಿದರು. ಮೂಡುಬಿದರೆ ಪುರಸಭೆ ಅಧ್ಯಕ್ಷ ಪ್ರಸಾದ್, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.
Next Story