ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟಕ್ಕೆ ಚಾಲನೆ

ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟಕ್ಕೆ ಇಂದು ಚಾಲನೆ ನೀಡಲಾಯಿತು.
ವಾರಣಾಸಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಇದರ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಹಮ್ಮಿಕೊಳ್ಳ ಲಾದ ಈ ತರಬೇತಿ ಕಮ್ಮಟವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ರಂಗಭೂಮಿ ಕಲಾವಿದರು ನೈಜ ಕಲಾವಿದರು. ಯಾಕೆಂದರೆ ಯಾವುದೇ ವಿಶ್ರಾಂತಿ ಇಲ್ಲದೆ ವೇದಿಕೆಯಲ್ಲಿ ಪ್ರೇಕ್ಷಕರಿಗೆ ನೇರ ವಾಗಿ ಅಭಿನಯವನ್ನು ಪ್ರದರ್ಶಿಸುತ್ತಾರೆ. ಈಗಿನ ಹೊಸ ತಲೆಮಾರು ಹೆಚ್ಚು ತೊಡಗಿಸಿಕೊಂಡಿರಿಲ್ಲ. ಆದರೆ ಇಂದು ಜನಪದ ಕಲೆಗಳಿಗೆ ಯುವ ಜನತೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ವಾರಣಾಸಿ ಎನ್ಎಸ್ಡಿ ನಿರ್ದೇಶಕ ರಾಮ್ಜಿ ಬಾಲಿ ಮಾತನಾಡಿ, ನಮ್ಮ ಸ್ಕೂಲ್ನ ಒಟ್ಟು ೨೦ ಮಂದಿ ವಿದ್ಯಾರ್ಥಿಗಳು ಈ ತರಬೇತಿ ಪಡೆಯಲಿದ್ದು, ಇದರಲ್ಲಿ ಐವರು ಮಹಿಳೆಯರು ಹಾಗೂ ೧೫ ಪುರುಷರಿದ್ದಾರೆ. ಇವರೆಲ್ಲ ಒಂದು ವರ್ಷದ ನಾಟ್ಯಶಾಸ್ತ್ರ ಕೋರ್ಸ್ ಮಾಡುತ್ತಿದ್ದು, ಅದರ ಅಂಗವಾಗಿ ಈ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಪಿ.ಎಲ್. ಎನ್.ರಾವ್ ವಹಿಸಿದ್ದರು. ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ತಲ್ಲೂರು ಶಿವರಾಮ ಶೆಟ್ಟಿ, ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ ಉಪಸ್ಥಿತರಿದ್ದರು.
ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಡಾ.ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.