ಪುತ್ತೂರು: ರಾಷ್ಟ್ರೀಯ ಮಟ್ಟದ ಹೊನಲು ಬೆಳಕು ವಾಲಿಬಾಲ್ ಪಂದ್ಯಾಟ ಸಮಾರೋಪ

ಪುತ್ತೂರು: ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್, ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್, ಹಾಗೂ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ವಿದ್ಯಾ ಗಂಗೋತ್ರಿ ಸವಣೂರು, ನೇತಾಜಿ ಯುವಕ ಮಂಡಲ ಕೂಡುರಸ್ತೆ ನರಿಮೊಗರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡಿದ್ದ ಮೂರು ದಿನಗಳ ರಾಷ್ಟ್ರಮಟ್ಟದ ಆಯ್ದ ವಿಶ್ವವಿದ್ಯಾಲಯಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರವಿವಾರ ಸಂಜೆ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದ ಮೂಲಕ ಸವಣೂರಿನಲ್ಲಿ ಅತ್ಯುತ್ತಮ ಕ್ರೀಡಾ ಹಬ್ಬದ ಆಯೋಜನೆಯಾಗಿದ್ದು ಪಂದ್ಯಾಕೂಟ ಯಶಸ್ವಿಯಾಗಿ ಸಾಗಿದೆ ಎಂದರು.
ಸುಳ್ಯ ನಗರಸಭಾ ಸದಸ್ಯ ಕೆ.ಎಂ. ಮುಸ್ತಫಾ ಜನತಾ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು ಶುಭ ಹಾರೈಸಿದರು.
ವೇದಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಚಂದ್ರಹಾಸ ರೈ, ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಕುಮಾರ್ ಬಿ.ಎಸ್, ಕಾರ್ಯದರ್ಶಿ ಶಂಕರ್ ಶೆಟ್ಟಿ ಬಿ.ಸಿ ರೋಡ್, ಪುತ್ತೂರು ತಾಲೂಕು ಅಧ್ಯಕ್ಷ ಬೇಬಿ ಜೋನ್, ಬೆಳ್ಳಾರೆ ಪೊಲೀಸ್ ಠಾಣಾ ಎಸ್ಸೈ ಆಂಜನೇಯ ರೆಡ್ಡಿ, ಉದ್ಯಮಿ ಸೀತರಾಮ ರೈ ಕೆದಂಬಾಡಿಗುತ್ತು, ಶರತ್ ಚಂದ್ರ ಬೈಪಡಿತ್ತಾಯ ನರಿಮೊಗರು, ಸುಂದರ ರೈ ಸವಣೂರು, ಹರೀಶ್ ರೈ ಉಬರಡ್ಕ, ನಾಮಧೇವ್, ಕೃಷ್ಣಕುಮಾರ್, ನಿವೃತ್ತ ದೈ.ಶಿ.ಶಿಕ್ಷಕ ಶಿವರಾಮ ಭಟ್ ಏನೆಕಲ್ಲು ಉಪಸ್ಥಿತರಿದ್ದರು. ಪುತ್ತೂರು ಉಪವಿಭಾಗ ಡಿವೈಎಸ್ಪಿ ಗಾನ ಪಿ ಕುಮಾರ್ ಪಂದ್ಯಾಟಕ್ಕೆ ಆಗಮಿಸಿ ಶುಭ ಹಾರೈಸಿದರು.
ಕ್ರೀಡಾ ಸಾಧಕರಿಗೆ ಸನ್ಮಾನ:
ವಿದ್ಯಾರಶ್ಮಿ ಪದವಿ ಕಾಲೇಜಿನ ದೈ.ಶಿ.ನಿರ್ದೇಶಕಿ ಪೂರ್ಣಿಮಾ, ಮಾಜಿ ವಾಲಿಬಾಲ್ ಆಟಗಾರ, ರಾಷ್ಟ್ರೀಯ ಅಥ್ಲೆಟ್ ಪ್ರಕಾಶ್ ಶೆಟ್ಟಿ ಹೆಜಮಾಡಿ, ಏಕಲವ್ಯ ಪ್ರಶಸ್ತಿ ವಿಜೇತ ಮಾಜಿ ರಾಷ್ಟ್ರೀಯ ವಾಲಿಬಾಲ್ ಆಟಗಾರ ರವೀಂದ್ರ, ಮಾಜಿ ರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಪ್ರಕಾಶ್ ರಾವ್, ದಾಮೋದರ ಶೆಟ್ಟಿ, ಉಷಾ ರಾಜಾರಾಮ್, ಗಣೇಶ್ ರೈ ಮುಂಡಾಸು, ಥೋಮಸ್ ಧರ್ಮಸ್ಥಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಜಿ ರಾಷ್ಟ್ರೀಯ ವಾಲಿಬಾಲ್ ಆಟಗಾರ ಸತ್ತಾರ್ ಗೂಡಿನಬಳಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪುತ್ತೂರು ತಾಲೂಕು ಯುವಜನ ಸೇವಾ ನಿಕಟಪೂರ್ವ ಕ್ರೀಡಾಧಿಕಾರಿ ಜಯರಾಮ ಗೌಡ ಸ್ವಾಗತಿಸಿದರು. ಪಂದ್ಯಾಟ ಸಮಿತಿಯ ಸಹ ಖಜಾಂಜಿ ಬಾಬು ಎಂ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ:
ಪಂದ್ಯಾಟದಲ್ಲಿ ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ಪ್ರಥಮ ಸ್ಥಾನ ಹಾಗೂ ಕ್ಯಾಲಿಕಟ್ ಯುನಿವರ್ಸಿಟಿ ದ್ವಿತೀಯ ಸ್ಥಾನ, ತಮಿಳುನಾಡು ಎಂ.ಜಿ ಯುನಿವರ್ಸಿಟಿ ತೃತೀಯ, ಮಂಗಳೂರು ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.
ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ತಂಡದ ಗುರು, ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಕ್ಯಾಲಿಕಟ್ ಯುನಿವರ್ಸಿಟಿ ತಂಡದ ನಾಸಿಫ್, ಬೆಸ್ಟ್ ಲಿಬೆರೊ ಪ್ರಶಸ್ತಿಯನ್ನು ಎಸ್.ಆರ್.ಎಂ ಯುನಿವರ್ಸಿಟಿ ತಂಡದ ಶ್ರೀಕಾಂತ್, ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಯನ್ನು ಕ್ಯಾಲಿಕಟ್ ಯುನಿವರ್ಸಿಟಿ ತಂಡದ ದಿಲ್ಸನ್ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ಪ್ರಥಮ ಸ್ಥಾನ, ಡಿವೈಎಸ್ಎಸ್ ಮೈಸೂರು ದ್ವಿತೀಯ ಸ್ಥಾನ. ಕ್ಯಾಲಿಕಟ್ ಯುನಿವರ್ಸಿಟಿ ತಂಡ ತೃತಿಯ ಹಾಗೂ ಮಂಗಳೂರು ಯುನಿವರ್ಸಿಟಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.
ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ತಂಡದ ಎಲಿಮಾತ್, ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಎಸ್.ಆರ್.ಎಂ ಯುನಿವರ್ಸಿಟಿ ಚೆನ್ನೈ ಅತಿರಾ ರೋಯ್, ಬೆಸ್ಟ್ ಲಿಬೆರೊ ಪ್ರಶಸ್ತಿಯನ್ನು ಡಿವೈಎಸ್ಎಸ್ ಮೈಸೂರು ತಂಡದ ಸ್ನೇಹಾ,ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಯನ್ನು ಡಿವೈಎಸ್ಎಸ್ ತಂಡದ ನಿವೇದಿತಾ ಪಡೆದುಕೊಂಡರು.







