ಖಾಸಗಿಯವರಿಗೆ ವಿದ್ಯುತ್ ಮಾರಾಟ ಮಾಡುತ್ತಿದ್ದರಾ ಎಂಬ ಅನುಮಾನ ಮೂಡಿದೆ: ಮಾಜಿ ಶಾಸಕ ಮಧು ಬಂಗಾರಪ್ಪ
ಆನವಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನಾ ಸಭೆ

ಶಿವಮೊಗ್ಗ, ಮಾ.14: ಸೊರಬ ತಾಲೂಕಿನ ವಿವಿಧ ಭಾಗದಲ್ಲಿ ವಿದ್ಯುತ್ ಸಮಸ್ಯೆಯಾಗಿದೆ. ಇಷ್ಟೆಲ್ಲಾ ಮಳೆಯಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ರೈತರಿಗೆ ವಿದ್ಯುತ್ ಸಿಗುತ್ತಿಲ್ಲ. ಖಾಸಗಿಯವರಿಗೆ ವಿದ್ಯುತ್ ಮಾರಾಟ ಮಾಡುತ್ತಿದ್ದರಾ ಎಂಬ ಅನುಮಾನ ಮೂಡಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.
ಆನವಟ್ಟಿಯಲ್ಲಿ ರೈತರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಬಂಗಾರಪ್ಪನವರು ರೈತರಿಗ ಉಚಿತವಾಗಿ ವಿದ್ಯುತ್ ನೀಡುತ್ತಿದ್ದರು. ವಿದ್ಯುತ್ ಕೊರತೆ ಮಾಡಿ, ನಾವು ದುಡ್ಡು ಕೊಡುತ್ತೇವೆ ವಿದ್ಯುತ್ ಕೊಡಿ ಎಂದು ರೈತರಿಂದ ಹೇಳಿಸಲು ಹೊರಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ. ಆದರೆ, ಜಿಲ್ಲೆಯಲ್ಲಿ ವಿದ್ಯುತ್ ಕೊರತೆ ಎದುರಾಗಿದೆ.
ಕಳೆದ ಸರ್ಕಾರದ ಅವಧಿಯಲ್ಲಿ ಘೋಷಿಸಿದ ಪವರ್ ಗ್ರೀಡ್ಗಳೇ ಇನ್ನೂ ಪೂರ್ಣಗೊಂಡಿಲ್ಲ. ಅದರಲ್ಲೂ ಎಲ್ಲಾದರೂ ಕಮಿಷನ್ ಸಿಗುತ್ತಾ ಎಂದು ಯೋಚನೆ ಮಾಡುತ್ತಿದ್ದಾರೆ. ಟ್ರಾನ್ಸ್ಫಾರ್ಮರ್ ಸುಟ್ಟು ಹೋದರೂ, ವಾರಗಟ್ಟಲೇ ಸರಿಯಾಗಲ್ಲ. ದಿನದಲ್ಲಿ ನಾಲ್ಕು ಗಂಟೆ ವಿದ್ಯುತ್ ನೀಡಿದರೂ, ನಾಲ್ಕು ಸರಿ ಹೋಗಿ ಬರುತ್ತೆ. ಹೀಗಾದರೆ, ಬೆಳೆ ಬೆಳೆದ ರೈತರ ಪರಿಸ್ಥಿತಿ ಏನಾಗಬೇಕು. ಇನ್ನು ಮುಂದಾದರೂ ರೈತರಿಗೆ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ಹಾಲನಗಲ್ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ,ಬಡವರಿಗೆ ಭಾಗ್ಯ ಜ್ಯೋತಿ ನೀಡಿರುವುದು, ಗ್ರಾಮೀಣ ಕೃಪಾಂಕ, ಅನ್ನಭಾಗ್ಯ, ಕ್ಷೀರ ಭಾಗ್ಯ ನೀಡಿರುವುದು ಕಾಂಗ್ರೆಸ್ ಪಕ್ಷವೆಂದು ಹೇಳಿದರು.
ಕಳೆದ ಎರಡುವರೆ ವರ್ಷದಲ್ಲಿ ಬಿಜೆಪಿಯ ಒಂದಾದರೂ ಜನಪರ ಯೋಜನೆಯನ್ನು ಜಾರಿ ಮಾಡಿದೆಯಾ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂಧನ ಸಚಿವರಿದ್ದಾಗ ವಿದ್ಯುತ್ ಸಮಸ್ಯೆಗಳಿಗೆ ಸ್ಪಂಧಿಸಿ ಹಲವು ಸುಧಾರಣೆಯನ್ನ ತಂದಿದ್ದರು. ಆ ಸುಧಾರಣೆಯನ್ನ ಬಳಸಿಕೊಂಡು ಸಮಗ್ರ ವಿದ್ಯುತ್ ಪೂರೈಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ಆರೋಪಿಸಿದರು.
ಕಾಂಗ್ರೆಸ್ಮುಖಂಡರಾದ ಜಿ.ಡಿ ಮಂಜುನಾಥ್,ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,ಸದಸ್ಯರುಗಳು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.








