ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು: ಶಾಸಕ ರಘುಪತಿ ಭಟ್

ಬೆಂಗಳೂರು, ಮಾ. 15: ‘ಸಮವಸ್ತ್ರ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದ್ದು, ನಮ್ಮ ದೇಶದ ಮುಸ್ಲಿಮರು ಕಾನೂನು ಗೌರವಿಸುವಂತಹವರು. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಬೇಕು' ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುವ ಬಗ್ಗೆ ಗೊಂದಲವಿತ್ತು. ಕೆಲವರು ಮೊದಲು ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದರು. ಉಡುಪಿ ಕಾಲೇಜಿನಲ್ಲಿಯೂ ವಿದ್ಯಾರ್ಥಿನಿಯರು ಅದನ್ನು ಧರಿಸುತ್ತಲೆ ಇರಲಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ಕಡ್ಡಾಯ ಮಾಡಿದ್ದರೆ ಅಲ್ಲಿ ಧಾರ್ಮಿಕ ವಸ್ತ್ರಗಳಿಗೆ ಅವಕಾಶವಿರಲಿಲ್ಲ. ಸಮವಸ್ತ್ರ ಕಡ್ಡಾಯವಲ್ಲದ ಕಾಲೇಜುಗಳಲ್ಲಿ ಅವರು ಧರಿಸಬಹುದಾಗಿತ್ತು' ಎಂದರು.
‘ಹೈಕೋರ್ಟ್ ತೀರ್ಪನ್ನು ನೀಡಿದ್ದು ‘ಹಿಜಾಬ್ ಧಾರ್ಮಿಕ ಆಚರಣೆಯ ಭಾಗವಲ್ಲ' ಎಂದು ಹೇಳಿರುವುದರಿಂದ ವಿವಾದ ಕೊನೆಗೊಂಡಿದೆ ಎಂದು ಭಾವಿಸಲಾಗುತ್ತಿದೆ. ಕೋರ್ಟ್ ಸರಕಾರದ ಆದೇಶವನ್ನು ಎತ್ತಿ ಹಿಡಿದಿಲ್ಲ. ಆದೇಶ ಸ್ಪಷ್ಟವಾಗಿರುವ ಕಾರಣ ಮುಸ್ಲಿಮ್ ಸಮುದಾಯದ ಹೆಣ್ಣುಮಕ್ಕಳು ಅದನ್ನು ಪಾಲಿಸಬೇಕು ಮತ್ತು ಕನಿಷ್ಠ ಶಿಕ್ಷಣ ಸಂಸ್ಥೆಗಳಲ್ಲಾದರೂ ಹಿಂದೂ-ಮುಸ್ಲಿಮ್ ಎಂಬ ಭೇದಭಾವವಿಲ್ಲದೆ ವಿದ್ಯಾಭ್ಯಾಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು' ಎಂದು ಅವರು ಮನವಿ ಮಾಡಿದರು.







