2025ಕ್ಕೆ ಕರ್ನಾಟಕ ನಂಬರ್ ಒನ್ ರಾಜ್ಯ ವಾಗಲಿದೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ.15: ಉತ್ಪಾದನೆ, ಸೇವೆ ಸೇರಿ ಒಟ್ಟಾರೆ ಆರ್ಥಿಕ ಬೆಳವಣಿಗೆಯಲ್ಲಿ 2025ಕ್ಕೆ ಕರ್ನಾಟಕ ನಂಬರ್ ಒನ್ ರಾಜ್ಯ ವಾಗಲಿದೆ. ಪ್ರಧಾನ ಮಂತ್ರಿನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ 1.5 ಟ್ರಿಲಿಯನ್ ಡಾಲರ್ ಗಳ ಕೊಡುಗೆ ಕರ್ನಾಟಕ ನೀಡಲಿದೆ ಎನ್ನುವ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಕರ್ನಾಟಕ ವಿಷನ್ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಬಾರಿಯ ಬಜೆಟ್ನಲ್ಲಿ ಆರ್ಥಿಕ ಬೆಳವಣಿಗೆಗೆ ಮಹತ್ವ ನೀಡಲಾಗಿದೆ. ಬಜೆಟ್ ಗಾತ್ರದಲ್ಲಿ 19000 ಕೋಟಿ ಹೆಚ್ಚಳವಾಗಿದೆ. ಇದನ್ನು ತಜ್ಞರೂ ನಿರೀಕ್ಷಿಸಿರಲಿಲ್ಲ. ಚುನಾವಣಾ ವರ್ಷವಾಗಿರುವುದರಿಂದ ಉಚಿತ ಕೊಡುಗೆಗಳಿರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ರಾಜ್ಯಕ್ಕೆ ಸಹಾಯ ಮಾಡುವವರಿಗೆ ನಾವು ಸಹಾಯ ಮಾಡಿದ್ದೇವೆ. ಬಿಸಿಲಿನಲ್ಲಿ ದುಡಿಯುವವರಿಗೆ ನಾವು ಸಹಾಯ ಹಸ್ತ ಚಾಚಿದ್ದೇವೆ ಎಂದರು.
ಆರ್ಥಿಕತೆಗೆ ಶಕ್ತಿ ತುಂಬಲು ರಸ್ತೆ, ರೈಲು, ವಿಮಾನ ನಿಲ್ದಾಣಗಳು, ಬಂದರುಗಳು ಸೇರಿದಂತೆ ಕೈಗಾರಿಕೆಗಳಿಗೆ ಬಹುದೊಡ್ಡ ಅವಕಾಶ ನೀಡಲಾಗಿದೆ. ಧಾರವಾಡ ಮತ್ತು ತುಮಕೂರಿನಲ್ಲಿ ವಿಶೇಷ ಹೂಡಿಕೆ ಪ್ರದೇಶ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಫುಡ್ ಪಾರ್ಕ್ , ಚೈನ್ನೈ- ಮುಂಬೈ ಕಾರಿಡಾರ್ ನಿರ್ಮಾಣ, ಬಿಜಾಪುರ, ಗುಲ್ಬರ್ಗಾ ದಲ್ಲಿ ಜವಳಿ ಪಾರ್ಕ್, ಇವುಗಳೆಲ್ಲ ಸಧೃಢ ಆರ್ಥಿಕತೆಗೆ ಭದ್ರ ಬುನಾದಿಯಾಗಲಿವೆ ಎಂದರು.
ಅಭಿವೃದ್ಧಿಯಲ್ಲಿ ಸಮಾನತೆ: ಅಭಿವೃದ್ಧಿಯಲ್ಲಿ ಸಮಾನತೆ ಇದ್ದಾಗ ಮಾತ್ರ ಆರ್ಥಿಕತೆ ಬೆಳೆಯುತ್ತದೆ. ಬೆಂಗಳೂರಿನ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗಿದೆ. ಪೆರಿಫೆರಲ್ ರಿಂಗ್ ರೋಡ್ ಗೆ ಅನುಮೋದನೆ ನೀಡಿ, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಎಲ್ಲಾ ನಗರಗಳ ರಿಂಗ್ ರೋಡ್ ಗಳಿಗೆ ಪ್ಯಾಕೇಜ್ ಗಳನ್ನು ನೀಡಲಾಗಿದೆ. ಎಸ್.ಟಿ.ಆರ್.ಆರ್ ದಾಬಸ್ ಪೇಟೆ ಯಿಂದ ಚೈನ್ನೈ ಹಾಗೂ ಮೈಸೂರು ರಸ್ತೆವರೆಗೆ ವಿಸ್ತರಣೆಯಾಗಲಿದೆ. ಮೆಟ್ರೋ ವಿಸ್ತರಣೆ ಯಾಗಲಿದೆ. ಸಬ್ ಅರ್ಬನ್ ರೈಲ್ವೆ ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ನಮ್ಮ ಸರಕಾರ ಭವಿಷ್ಯದ ಆರ್ಥಿಕತೆಗೆ ಬುನಾದಿ ಹಾಕುತ್ತಿದೆ. ಇದು ಜನಪರ ಸರ್ಕಾರವಾಗಿದೆ ಎಂದರು. ಸಚಿವರಾದ ಡಾ.ಕೆ.ಸುಧಾಕರ್, ಬಿ.ಎ. ಬಸವರಾಜ, ಎಫ್ ಕೆಸಿಸಿಐ ಅಧ್ಯಕ್ಷ ಡಾ. ಐ.ಎಸ್.ಪ್ರಸಾದ್ ಉಪಸ್ಥಿತರಿದ್ದರು.







