ಮಾ. 19: ಹಿರಿಯಡ್ಕದಲ್ಲಿ ಕಾಂಗ್ರೆಸ್ನಿಂದ ಭೂಸುಧಾರಣಾ ಕಾನೂನು ಸುವರ್ಣ ಸಂಭ್ರಮ
ಸಿದ್ಧರಾಮಯ್ಯ ಉಪಸ್ಥಿತಿ
ಉಡುಪಿ : ಕಾಂಗ್ರೆಸ್ ಸರಕಾರ ಕಳೆದ ೭೦ರ ದಶಕದಲ್ಲಿ ಯಶಸ್ವಿ ಯಾಗಿ ಜಾರಿಗೊಳಿಸಿದ್ದ ಭೂಸುಧಾರಣಾ ಕಾನೂನು ಅನುಷ್ಠಾನಗೊಂಡು ೫೦ ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ನ ವತಿಯಿಂದ ‘ಸುವರ್ಣ ಸಂಭ್ರಮದಲ್ಲಿ ಭೂ ಸುಧಾರಣಾ ಕಾನೂನು ’ಎಂಬ ಬೃಹತ್ ಸಮಾವೇಶವನ್ನು ಮಾ.೧೯ರ ಶನಿವಾರ ಬೆಳಗ್ಗೆ ೧೦:೩೦ಕ್ಕೆ ಹಿರಿಯಡ್ಕದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಳುವವನೇ ಹೊಲದೊಡೆಯ’ ಎಂಬ ಘೋಷಣೆಯೊಂದಿಗೆ ಜಾರಿಗೊಂಡ ಈ ಭೂ ಸುಧಾರಣಾ ಕಾಯ್ದೆಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಲಕ್ಷಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ ಎಂದರು.
೧೯೭೨ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ಈ ಮಸೂದೆ ದೇಶಾದ್ಯಂತ ಜಾರಿಗೊಂಡಿತ್ತು. ೧೯೭೪ರಲ್ಲಿ ಅಂದು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರು ಈ ಮಸೂದೆಯನ್ನು ಕಾಯ್ದೆಯನ್ನಾಗಿಸಿ ರಾಜ್ಯಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸಲು ಇದಕ್ಕೆ ಒಂದು ಇಲಾಖೆಯನ್ನೇ ಸೃಷ್ಟಿಸಿದ್ದರು. ಅಂದು ಮಂಗಳೂರಿನ ಶಾಸಕರಾಗಿದ್ದ ಬಿ.ಸುಬ್ಬಯ್ಯ ಶೆಟ್ಟಿ ಅವರನ್ನು ಭೂ ಸುಧಾರಣಾ ಸಚಿವರನ್ನಾಗಿ ನೇಮಕಗೊಳಿಸಿದ್ದರು ಎಂದು ಕೊಡವೂರು ವಿವರಿಸಿದರು.
ಮಾ.೧೯ರ ಸಮಾವೇಶವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತವಿರೋಧ ಪಕ್ಷದ ನಾಯಕರಾಗಿರುವ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಭೂಸುಧಾರಣಾ ಕಾಯ್ದೆಯಿಂದ ಭೂಮಾಲಕರಾಗಿ ಇಂದಿಗೂ ಈ ಭೂಮಿಯನ್ನು ಕೃಷಿ ಮಾಡುತ್ತಾ ಉಳುವವನೇ ಹೊಲದೊಡೆಯ ಎಂಬ ಘೋಷಣೆಯನ್ನು ಸಾಕಾರಗೊಳಿಸಿದ ಒಟ್ಟು ೫೦ ಮಂದಿ ಫಲಾನುಭವಿ ಗಳನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಗುವುದು ಎಂದೂ ಅವರು ತಿಳಿಸಿದರು.
ಅಲ್ಲದೇ ರಾಜ್ಯದಲ್ಲಿ ಭೂ ಸುಧಾರಣಾ ಮಸೂದೆ ಜಾರಿಯಾದಾಗ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕಾರ್ಕಳದ ಮಾಜಿ ಶಾಸಕರಾದ ವೀರಪ್ಪ ಮೊಯ್ಲಿ ಅವರನ್ನು ಅಭಿನಂದಿಸಲಾ ಗುವುದು ಎಂದವರು ಹೇಳಿದರು.
ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವ ಹಾಗೂ ವಿಧಾನಸಭೆಯಲ್ಲಿ ವಿಪಕ್ಷದ ಉಪನಾಯಕ ಯು.ಟಿ.ಖಾದರ್, ಮಾಜಿ ವಿಧಾನಪರಿಷತ್ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ, ಎಂಎಲ್ಸಿ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಸುಬ್ಬಯ್ಯ ಶೆಟ್ಟಿ, ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ವಕ್ತಾರ ಬಿಪಿನ್ಚಂದ್ರ ಪಾಲ್ ನಕ್ರೆ, ಪ್ರಖ್ಯಾತ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.