ರಾಜ್ಯ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

ಉಡುಪಿ, ಮಾ.17: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುಸ್ಲಿಮ್ ಸಂಘಟನೆಗಳು ಕರೆ ನೀಡಿದ್ದ ಗುರುವಾರದ ರಾಜ್ಯ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಮುಸ್ಲಿಮರು ತಮ್ಮ ವ್ಯಾಪಾರ ವಹಿವಾಟುಗಳ ಮುಚ್ಚಿ ಸಮುದಾಯದ ಸಂಘಟನೆಗಳು ತೆಗೆದುಕೊಂಡ ನಿರ್ಣಯವನ್ನು ಬೆಂಬಲಿಸಬೇಕಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ವಿನಂತಿಸಿತ್ತು. ಅದರಂತೆ ಜಿಲ್ಲೆಯ ಉಡುಪಿ ನಗರ, ಕಾರ್ಕಳ, ಕುಂದಾಪುರ, ಬೈಂದೂರು, ಕಾಪು, ಪಡುಬಿದ್ರೆ, ಶಿರ್ವಗಳಲ್ಲಿ ಮುಸ್ಲಿಮರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ನೀಡಿದರು.
ಉಡುಪಿ ನಗರದಲ್ಲಿ ಜಾಮಿಯ ಮಸೀದಿ, ಅಂಜುಮನ್ ಮಸೀದಿ ರಸ್ತೆಯಲ್ಲಿ ಸಂಪೂರ್ಣ ಬಂದ್ ಕಂಡುಬಂದಿದೆ. ಅದೇ ರೀತಿ ತರಕಾರಿ ಮಾರುಕಟ್ಟೆಯಲ್ಲಿಯೂ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಅಲ್ಲದೆ ಮುಸ್ಲಿಮರ ಹೊಟೇಲ್, ಹೂವು ಅಂಗಡಿ, ಚಪ್ಪಲಿ, ಬಟ್ಟೆ ಸೇರಿದಂತೆ ಹೆಚ್ಚಿನ ಅಂಗಡಿಗಳು ಮುಚ್ಚಿವೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.