ಹೆಣ್ಣು ಮಕ್ಕಳ ಶಿಕ್ಷಣ ಹಾಳು ಮಾಡಬೇಡಿ: ಸರಕಾರ ಮತ್ತು ರಾಜಕೀಯ ಪಕ್ಷಗಳಿಗೆ ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಬೆಂಗಳೂರು, ಮಾ.17: ಹಿಜಾಬ್ ಅಥವಾ ಬೇರೆ ಯಾವುದೇ ವಿಷಯಕ್ಕಿಂತ ಹೆಣ್ಣು ಮಕ್ಕಳ ಶಿಕ್ಷಣ ಬಹಳ ಮುಖ್ಯ. ಒಬ್ಬ ಹೆಣ್ಣು ಮಗು ಕಲಿತರೆ ಆ ಕುಟುಂಬಕ್ಕೆ ಬೆಳಕು ಬಂದಂತೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದರು.
ಗುರುವಾರ ವಿಧಾನಸೌಧದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿವಿಧ ಬಗೆಯ ಶಾಲಾ ಸಮವಸ್ತ್ರಗಳ ಫೋಟೋಗಳನ್ನು ಪ್ರದರ್ಶನ ಮಾಡಿದರು. ನ್ಯಾಯಾಲಯದ ತೀರ್ಪು ಬಂದಿದೆ. ತೀರ್ಪು ಪಾಲನೆ ಎಲ್ಲರ ಕರ್ತವ್ಯ. ಇನ್ನಾದರೂ ಸರಕಾರ ತಾಯಿ ಹೃದಯದಿಂದ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಉದಾತ್ತವಾಗಿ ಹೆಜ್ಜೆ ಇಡಬೇಕು. ಮಕ್ಕಳ ಹಾಲಿನಂತಹ ಮನಸ್ಸನ್ನ ಒಡೆಯಬಾರದು ಎಂದರು.
ಹಾಗೆಯೇ, ರಾಜಕೀಯ ಉದೇಶದಿಂದ ಮುಂಚೂಣಿಗೆ ಬಂದ ಈ ಎಲ್ಲ ಅನಪೇಕ್ಷಿತ ವಿವಾದಗಳಿಂದ ಮಕ್ಕಳಿಗೆ ಅನ್ಯಾಯ ಆಗಿದೆ. ನಿಜಕ್ಕೂ ಅವರೇ ಬಲಿಪಶುಗಳು. ಇದನ್ನು ಸರಕಾರವಾಗಲಿ ಅಥವಾ ಮಕ್ಕಳು, ಪೋಷಕರು ಲಘುವಾಗಿ ಪರಿಗಣಿಸಬಾರದು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ರಾಜಕೀಯದಲ್ಲಿ ಈ ವಿವಾದಗಳನ್ನು ಇನ್ನೂ ಜೀವಂತವಾಗಿ ಇಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ಗೆ ಹಿಜಾಬ್ ಭಯ ಅಂತ ಕೆಲವರು ಹೇಳುತ್ತಿದ್ದಾರೆ. ಬಿಜೆಪಿ, ಎಸ್ಡಿಪಿಐ ನೇರಾ ನೇರಾ ಸಮರ ಅಂತ ಹೇಳುತ್ತಿದ್ದಾರೆ. ಅಲ್ಲಿಗೆ ಇದೆಲ್ಲ ಘಟನೆಗಳ ಹಿಂದೆ ರಾಜಕೀಯದ ವಾಸನೆ ಇದೆ ಎಂದಾಯಿತು ಅಲ್ಲವೇ ಎಂದು ಅವರು ಪ್ರಶ್ನೆ ಮಾಡಿದರು.
ಈಗಾಗಲೇ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡಲು ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದೇನೆ. ಸಭಾಧ್ಯಕ್ಷರು ಇವತ್ತು ಅವಕಾಶ ಕೊಡುತ್ತಾರೋ, ನಾಳೆ ಕೊಡುತ್ತಾರೋ ಎಂದು ಕಾಯುತ್ತಿದ್ದೇನೆ. ಹೈಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಇದರಲ್ಲಿ ಎರಡು ಮಾತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ತೀರ್ಪು ಹೊರಬಂದ ಬಳಿಕ ಕೆಲ ವಿದ್ಯಾರ್ಥಿನಿಯರು ಶಾಲೆಗೆ ಹೋಗದಿರುವುದು ದೇಶಕ್ಕೆ ಆಗುತ್ತಿರುವ ನಷ್ಟ. ಶಿಕ್ಷಣ ಅತೀ ಮುಖ್ಯವಾದದ್ದು ಹಾಗೂ ಆ ಮಕ್ಕಳ ಮುಂದಿನ ಜೀವನೋಪಾಯ, ಭವಿಷ್ಯಕ್ಕೆ ಅಗತ್ಯ. ಇದನ್ನು ಯಾರು ಕೂಡ ನಿರ್ಲಕ್ಷ್ಯ ಮಾಡಬಾರದು ಎಂದು ಅವರು ಸರಕಾರವನ್ನು ಆಗ್ರಹಪಡಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಘಟನೆಗಳು ನಡೆಯುತ್ತಿವೆ. ನ್ಯಾಯಾಲಯವೇ ಈ ಘಟನೆಗಳ ಹಿಂದೆ ಕಾಣದ ಕೈಗಳು ಇವೆ ಎಂದು ಹೇಳಿದೆ. ಆ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು ಹಾಗೂ ಸರಕಾರವು ಕಾಣದ ಆ ಕೈಗಳ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಇದೇ ವೇಳೆಯಲ್ಲಿ ಅವರು ಒತ್ತಾಯ ಮಾಡಿದರು.
ನಾನು ಸರಕಾರ ಮತ್ತು ಮುಸ್ಲಿಂ ಬಾಂಧವರನ್ನು ವಿನಂತಿ ಮಾಡುತ್ತೇನೆ. ಯಾವ ರಾಜಕೀಯ ಪಕ್ಷವೂ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಆಟ ಆಡುವುದು ಬೇಡ. ಅದರಲ್ಲೂ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ಬಹುಮುಖ್ಯ. ಆ ಸಮುದಾಯದಲ್ಲಿ ಬಡತನ ಜಾಸ್ತಿ ಇದ್ದು, ಅನಕ್ಷರತೆಯೂ ಇದೆ. ಸಾಕ್ಷರತೆ ಬಂದರೆ ಎಲ್ಲ ಸಮಸ್ಯೆಗಳಿಗೆ ತಾನಾಗಿಯೇ ಪರಿಹಾರ ಸಿಗುತ್ತದೆ. ನನ್ನ ಕಾಳಜಿ ಇಷ್ಟೇ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.
ಮಕ್ಕಳ ಮನದಲ್ಲಿ ದ್ವೇಷದ ದಳ್ಳುರಿ ಬೇಡ: ಮಕ್ಕಳ ಮನಸ್ಸಲ್ಲಿ ದ್ವೇಷದ ದಳ್ಳುರಿಯನ್ನು ಯಾರೂ ಭಿತ್ತಬಾರದು, ಅಂತಹ ಭಾವನೆಗಳನ್ನು ಯಾರೂ ಪ್ರೋತ್ಸಾಹಿಸಬಾರದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಾವು ಬಳಸುವ ದುಪಟ್ಟಾವನ್ನ ವಿವಿಧ ರೀತಿಯಲ್ಲಿ ಧರಿಸುತ್ತಾರೆ. ಆ ಮಕ್ಕಳು ಆಟ ಆಡುವಾಗ ಅದನ್ನು ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ಅದೇ ಬಿಸಿಲು ಇದ್ದಾಗ ತಲೆ ಮೇಲೆ ಹಾಕಿಕೊಳ್ಳುತ್ತಾರೆ. ಇನ್ನು ಕೆಲ ಹೆಣ್ಣು ಮಕ್ಕಳು ಕುತ್ತಿಗೆಯ ಕೆಳಗೆ ವಿ ಶೇಪ್ ಮಾದರಿಯಲ್ಲಿ ಹಾಕಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಅದೇ ರೀತಿ ಮುಸ್ಲಿಂ ಮಕ್ಕಳಿಗೆ ಆ ದುಪಟ್ಟಾವನ್ನು ತಲೆಗೆ ಸೆರಗಿನ ರೀತಿ ಧರಿಸಲು ಅವಕಾಶ ಕೊಟ್ಟರೆ ಸಮಸ್ಯೆ ಮುಗಿಯುತ್ತದೆ. ಸಮವಸ್ತ್ರ ಬಿಟ್ಟು ಬೇರೆ ವಸ್ತ್ರ ಧರಿಸುವ ಅವಶ್ಯಕತೆ ಇಲ್ಲ. ಸರಕಾರ ಈ ಬಗ್ಗೆ ಆದೇಶ ಹೊರಡಿಸಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ ಎಂದು ಕುಮಾರಸ್ವಾಮಿ ಹೇಳಿದರು.







