ಯಕ್ಷಗಾನ ಕಲಾವಿದ ತೋಡಿಕಾನ ವಿಶ್ವನಾಥ ಗೌಡ ನಿಧನ

ಉಡುಪಿ, ಮಾ.18: ತೆಂಕುತಿಟ್ಟಿನ ಹೆಸರಾಂತ ಸ್ತ್ರೀವೇಷಧಾರಿ ವಿಶ್ವನಾಥ ಗೌಡ (62) ಗುರುವಾರ ಸಂಜೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದ್ರು ಅವರಲ್ಲಿ ಯಕ್ಷಗಾನ ತರಬೇತಿ ಪಡೆದು ನಾಲ್ಕುವರೆ ದಶಕಗಳಿಂದ ಕಲಾ ಸೇವೆಗೈದ ವಿಶ್ವನಾಥ ಗೌಡ ಅವರು ಸುಂಕದ ಕಟ್ಟೆ, ಕದ್ರಿ, ಕುಂಬಳೆ, ಕರ್ನಾಟಕ ಮೇಳಗಳಲ್ಲಿ ತಿರುಗಾಟ ಮಾಡಿ ಕಳೆದ ಮೂರು ದಶಕಗಳಿಂದ ಕಟೀಲು ಮೇಳದಲ್ಲಿ ದ್ದರು.
ದಮಯಂತಿ, ಚಂದ್ರಮತಿ, ಕಯಾದು, ಸೀತೆ, ಶ್ರೀದೇವಿ, ನಂದಿನಿ, ಯಶೋಮತಿ, ಅಜಮುಖಿ, ಶಾರದೆ, ಶಶಿಪ್ರಭೆಯೂ ಸೇರಿದಂತೆ ಹಲವು ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದರು.
ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.