ಯಕ್ಷ ಕಲಾವಿದ ತೋಡಿಕಾನ ವಿಶ್ವನಾಥ ಗೌಡ ನಿಧನ

ಉಡುಪಿ : ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ತೋಡಿಕಾನ ವಿಶ್ವನಾಥ ಗೌಡ (೬೨) ಅವರು ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ತಮ್ಮ ಸ್ವಗೃಹದಲ್ಲಿ ಗುರುವಾರ ಸಂಜೆ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದ್ರು ಅವರಲ್ಲಿ ಯಕ್ಷಗಾನ ತರಬೇತಿ ಪಡೆದು ನಾಲ್ಕುವರೆ ದಶಕಗಳಿಂದ ಕಲಾಸೇವೆ ಮಾಡಿರುವ ವಿಶ್ವನಾಥ ಗೌಡರು ಸುಂಕದಕಟ್ಟೆ, ಕದ್ರಿ, ಕುಂಬಳೆ, ಕರ್ನಾಟಕ ಮೇಳಗಳಲ್ಲಿ ತಿರುಗಾಟ ಮಾಡಿ ಕಳೆದ ಮೂರು ದಶಕಗಳಿಂದ ಕಟೀಲು ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದರು.
ದಮಯಂತಿ, ಚಂದ್ರಮತಿ, ಕಯಾದು, ಸೀತೆ, ಶ್ರೀದೇವಿ, ಯಶೋಮತಿ, ನಂದಿನಿ, ಅಜಮುಖಿ, ಶಾರದೆ, ಶಶಿಪ್ರಭೆಯೂ ಸೇರಿದಂತೆ ಹಲವು ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರ ರಾಗಿದ್ದರು. ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರು ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ.
Next Story