ಉಡುಪಿ ಶ್ರೀಕೃಷ್ಣ ಮಠಕ್ಕೆ ಗೋವಾ ರಾಜ್ಯಪಾಲರ ಭೇಟಿ
![ಉಡುಪಿ ಶ್ರೀಕೃಷ್ಣ ಮಠಕ್ಕೆ ಗೋವಾ ರಾಜ್ಯಪಾಲರ ಭೇಟಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಗೋವಾ ರಾಜ್ಯಪಾಲರ ಭೇಟಿ](/images/placeholder.jpg)
ಉಡುಪಿ : ಗೋವಾದ ರಾಜ್ಯಪಾಲರಾದ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರು ಕುಟುಂಬ ಸಮೇತರಾಗಿ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು, ಗೋಶಾಲೆಯಲ್ಲಿ ಗೋವುಗಳಿಗೆ ಗೋಗ್ರಾಸ ನೀಡಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ನೆರೆಯ ಕೇರಳದವನಾಗಿದ್ದರೂ ಉಡುಪಿ ಭೇಟಿಯ ಕನಸು ಬಹಳ ತಡವಾಗಿ ನನಸಾಗುತ್ತಿದೆ. ಕಳೆದ ಹಲವು ಶತಮಾನಗಳಿಂದ ಭಾರತೀಯ ಸನಾತನ ಸದ್ವಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರವಾದುದು. ಇಂದು ಶ್ರೀಕೃಷ್ಣನ ದರ್ಶನದಿಂದ ಅತ್ಯಂತ ಸಂತೋಷಗೊಂಡಿದ್ದೇನೆ. ಈ ಹಿಂದೆ ೧೯೭೮ ರಲ್ಲಿ ಕೇರಳದಲ್ಲಿ ಸನಾತನ ಧರ್ಮರಕ್ಷಣೆಯ ಸಲುವಾಗಿ ಬೃಹತ್ ಸಂತ ಸಮಾವೇಶ ಮತ್ತು ಹಿಂದು ಸಂಗಮ ನಡೆದಾಗ ಶ್ರೀವಿಶ್ವೇಶತೀರ್ಥ ಶ್ರೀಪಾದರೇ ನೇತೃತ್ವ ವಹಿಸಿ ನೀಡಿದ ಮಾರ್ಗದರ್ಶನ ಅವಿಸ್ಮರಣೀಯ. ಆ ಧರ್ಮೋತ್ಸವದ ಸಂಯೋಜಕ ಸಮಿತಿಯಲ್ಲಿ ನಾನೂ ಓರ್ವ ಸಂಚಾಲಕನಾಗಿದ್ದೆ. ವಿಶ್ವೇಶ ತೀರ್ಥರು ಒಬ್ಬ ಅದ್ಭುತ ಶಕ್ತಿಯಾಗಿದ್ದರು ಎಂದು ಎಂದು ರಾಜ್ಯಪಾಲರು ಸ್ಮರಿಸಿಕೊಂಡರು.
ಶ್ರೀಕೃಷ್ಣಮಠದಲ್ಲಿ ರಾಜ್ಯಪಾಲರನ್ನು ಕೃಷ್ಣಾಪುರ ಮಠದ ದಿವಾನರಾದ ವರದರಾಜ ಭಟ್ಟರು ಮತ್ತು ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಸ್ವಾಗತಿಸಿದರು. ಶ್ರೀಕೃಷ್ಣ ಮುಖ್ಯಪ್ರಾಣ, ಸರ್ವಜ್ಞ ಪೀಠ, ಸುಬ್ರಹ್ಮಣ್ಯ ದೇವರು, ನವಗ್ರಹ ದೇವರ ದರ್ಶನ ಪಡೆದು ತೀರ್ಥ ಪ್ರಸಾದವನ್ನೂ ಸ್ವೀಕರಿಸಿ ಗೋಶಾಲೆಗೆ ಭೇಟಿ ನೀಡಿ ಗೋವುಗಳನ್ನು ಕಂಡು ಸಂತಸಪಟ್ಟರು.
ಗೋವಾ ರಾಜ್ಯಪಾಲರೊಂದಿಗೆ ಅವರ ಪತ್ನಿ ರೀಟಾ, ಉಡುಪಿ ತಹಶೀಲ್ದಾರ್ ಡಿ.ಅರ್ಚನಾ ಭಟ್ ಹಾಗೂ ಇತರರು ಉಪಸ್ಥಿತರಿದ್ದರು