ಸಮಾಜದ ಇಂದಿನ ದುಸ್ಥಿತಿಗೆ ಮೌಲ್ಯಯುತ ಜೀವನ ಕಡೆಗಣನೆ ಕಾರಣ: ನ್ಯಾ.ಎನ್.ಸಂತೋಷ್ ಹೆಗಡೆ

ಬೆಂಗಳೂರು, ಮಾ.18: ನಮ್ಮ ಪೂರ್ವಿಕರು ಹಾಕಿಕೊಟ್ಟ ಮೌಲ್ಯಯುತ ಜೀವನಕ್ರಮಗಳನ್ನು ಕಡೆಗಣಿಸಿರುವುದೇ ನಮ್ಮ ಸಮಾಜದ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 317ಎ ಆಯೋಜಿಸಿದ್ದ ಕಾನೂನು ರಕ್ಷಣೆ ನಮ್ಮೆಲ್ಲರ ಹೊಣೆ ಘೋಷವಾಕ್ಯದೊಂದಿಗೆ ಪ್ರಾಂತ್ಯ 7ರ ಪ್ರಾಂತೀಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಕಾನೂನಿನ ಅರಿವು ಮೂಡಿಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಐವತ್ತರ ದಶಕದಲ್ಲಿ ಊರಿನಲ್ಲಿ ಯಾವುದೋ ತಪ್ಪಿನ ಕಾರಣಕ್ಕೆ ಯಾರಿಗಾದರೂ ಜೈಲುಶಿಕ್ಷೆ ಆಗಿದ್ದಲ್ಲಿ ಅಂತಹ ವ್ಯಕ್ತಿಯಿಂದ ಸಮಾಜ ಅಂದು ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿಯಿತ್ತು, ಆದರೀಗ ನಾನಾ ಕಾರಣಗಳಿಗೆ ಜೈಲಿಗೆ ಹೋಗಿ ಆಚೆ ಬರುವವರನ್ನು ಹಾರ ತುರಾಯಿ ಮೆರವಣಿಗೆಗಳ ಮೂಲಕ ಸ್ವಾಗತಿಸುವ ಪದ್ಧತಿಯನ್ನು ನಾವಿಂದು ಈ ಸಮಾಜದಲ್ಲಿ ಕಾಣುತ್ತಿದ್ದೇವೆ. ಅದು ಸರಿಯೇ ಎಂಬ ಪ್ರಶ್ನೆಗೆ, ಈಗ ಕೇಳಿಬರುವ ಸಮರ್ಥನೀಯ ಸಿದ್ಧ ಉತ್ತರ ಗಾಂಧೀಜಿ ಅವರು ಸಹ ಜೈಲು ವಾಸ ಅನುಭವಿಸಿರಲಿಲ್ಲವೇ? ಎಂಬುದಾಗಿದೆ ಎಂದರು.
ತಾವು ಸರಕಾರಿ ಸೇವೆಯಿಂದ ನಿವೃತ್ತರಾಗಿ ಹನ್ನೊಂದು ವರ್ಷ ಕಳೆದಿದ್ದು, ಈಗ ತಮ್ಮ 82 ವರ್ಷ ವಯಸ್ಸಿನಲ್ಲಿಯೂ ಸಮಾಜದಲ್ಲಿ ಮೌಲ್ಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಇದುವರೆಗೂ 1 ಸಾವಿರಕ್ಕೂ ಅಧಿಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಇರುವುದರಲ್ಲೇ ತೃಪ್ತಿ ಪಡುವುದನ್ನು ಹಾಗೂ ದುರಾಸೆಯಿಂದ ಮತ್ತೊಬ್ಬರಿಗೆ ಸೇರಿದ, ಸೇರಬೇಕಾದುದನ್ನು ಕಸಿದುಕೊಳ್ಳುವುದು ತಪ್ಪು ಎಂಬುದನ್ನು ಮಕ್ಕಳಲ್ಲಿ ಪ್ರಾಥಮಿಕವಾಗಿ ಮನವರಿಕೆ ಮಾಡಿಸುವಂತಹ ಮೌಲ್ಯಯುತ ಶಿಕ್ಷಣ ಇಂದಿನ ಶೈಕ್ಷಣಿಕ ಪದ್ಧತಿಯಲ್ಲಿ ಇಲ್ಲವಾಗಿರುವುದರ ಬಗ್ಗೆ ಮತ್ತು ಶಿಕ್ಷಣ ರಂಗ ತನ್ನ ಕರ್ತವ್ಯವನ್ನು ಮೌಲ್ಯರಹಿತವಾದ ಶಿಕ್ಷಣವನ್ನು ನೀಡಿ ಹಣ ಮಾಡುವ ದಂಧೆಯಾಗಿ ಪರಿವರ್ತನೆಗೊಂಡಿರುವ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದರು.
ಇಂದು ನಮ್ಮನ್ನಾಳುತ್ತಿರುವ ಪ್ರಜಾಪ್ರತಿನಿಧಿಗಳಲ್ಲಿ ಶೇ.22ರಷ್ಟು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಅವರನ್ನು ಅಲ್ಲಿಗೆ ಆರಿಸಿ ಕಳಿಸಿದ ಈ ನಮ್ಮ ಸಮಾಜಕ್ಕೆ ಅವರು ನೀಡುವ ಕೊಡುಗೆ ಎಂತಹುದು ಎಂದು ಬೇರೆ ಹೇಳಬೇಕೆಂದಿಲ್ಲ, ಸಮಾಜದಲ್ಲಿ ಅದರ ಫಲವನ್ನು ಎಲ್ಲರೂ ಅನುಭವಿಸುತ್ತಿದ್ದೇವೆ. ಇಂದು ಪ್ರಾಮಾಣಿಕವಾಗಿರುವ ವ್ಯಕ್ತಿ ಸಮಾಜದ ದೃಷ್ಟಿಯಲ್ಲಿ ಒಬ್ಬ ಹುಚ್ಚ! ತಾನೂ ತಿನ್ನಲಾರ ಬೇರೆಯವರಿಗೂ ತಿನ್ನಲು ಬಿಡಲಾರ ಎಂಬ ಮನಸ್ಥಿತಿಯಲ್ಲಿದ್ದಾರೆ ಹೆಚ್ಚಿನವರು ಎಂಬುದು ಇಂದಿನ ವಾಸ್ತವ ಸಂಗತಿ ಎಂದರು.
1950ರ ದಶಕದಲ್ಲಿ 50 ಲಕ್ಷ ರೂಪಾಯಿಗಳ ಭ್ರಷ್ಟಾಚಾರ ಹಗರಣದಿಂದ ಪ್ರಾರಂಭವಾಗಿ ಈಗ ಅದು ಲಕ್ಷಾಂತರ ಕೋಟಿ ರೂ.ಗಳ ಮಟ್ಟಕ್ಕೆ ತಲುಪಿದೆ. ಸಾವಿರಾರು ಕೋಟಿ ಸಾರ್ವಜನಿಕರ ಹಣವನ್ನು ಭ್ರಷ್ಟಾಚಾರದ ಮೂಲಕ ನಿರ್ಭಯವಾಗಿ ಗಳಿಸುವ ಜನಕ್ಕೆ ಕಾನೂನಿನ ಬಗ್ಗೆ ಸ್ವಲ್ಪವೂ ಭಯವಿಲ್ಲವಾಗಿರುವುದು ದುರದೃಷ್ಟಕರ ಸಂಗತಿ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಂತೀಯ 7ರ ಅಧ್ಯಕ್ಷ ಲಯನ್ ಕೃಷ್ಣಮೂರ್ತಿ ಸೇರಿ ಲಯನ್ಸ್ ಕ್ಲಬ್ನ ಕಾರ್ಯದರ್ಶಿಗಳು, ಜಿಲ್ಲಾ ಲಯನ್ಸ್ ಕ್ಲಬ್ನ ಮುಖಂಡರು ಉಪಸ್ಥಿತರಿದ್ದರು.







