ನಿಂತಿಕಲ್ಲಿನಲ್ಲಿ ಡಿಸಿಸಿ ಬ್ಯಾಂಕಿನ ಶಾಖೆ ಉದ್ಘಾಟನೆ

ಸುಳ್ಯ : ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ರಾಷ್ಟ್ರೀಯ ಬ್ಯಾಂಕ್ ಗಳಿಂದ ಗ್ರಾಮೀಣ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಬ್ಯಾಂಕ್ಗಳ ಸಿಬ್ಬಂದಿಗಳಲ್ಲಿ ಭಾಷೆಯ ಸಮಸ್ಯೆ ಉದ್ಬವವಾಗುತ್ತಿದೆ. ಆದರೆ ಅಂತಹ ಸಮಸ್ಯೆ ಸಹಕಾರಿ ಬ್ಯಾಂಕ್ಗಳಲ್ಲಿ ಇಲ್ಲ. ಇದರಿಂದ ಸಹಕಾರಿ ಸಂಘಗಳ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿಬಾರದ ರೀತಿ ಕೆಲಸ ಮಾಡುತ್ತಿದೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.
ಅವರು ನಿಂತಿಕಲ್ಲಿನ ಧರ್ಮಸ್ರೀ ಆರ್ಕೇಡ್ನಲ್ಲಿ ನೂತನವಾಗಿ ಆರಂಭಗೊಂಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 109ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸಹಕಾರಿ ಬ್ಯಾಂಕಿನ ನವೋದಯ ಸಂಘಗಳ ಮೂಲಕ ಗ್ರಾಮೀಣ ಪ್ರದೇಶಗಳ ಕುಟುಂಬಗಳು ಆರ್ಥಿಕ ಬೆಳವಣಿಗೆ ಕಂಡಿದೆ. ಸರಕಾರದ ಹಲವು ಇಲಾಖೆಗಳ ಯೋಜನೆಗಳಿಗೆ ರಾಷ್ಟ್ರೀಯ ಬ್ಯಾಂಕ್ಗಳಿಂದ ಸಾಲ ನೀಡುವ ಪದ್ದತಿ ಇದೆ. ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಫಲಾನುಭವಿಗಳಿಗೆ ಸುಲಭ ರೀತಿಯಲ್ಲಿ ವ್ಯವಹರಿಸಲು ಮತ್ತು ತ್ವರಿತ ಸಾಲ ಯೋಜನೆಯನ್ನು ಸಹಕಾರಿ ಸಂಘಗಳ ಮೂಲಕ ಸಾಲ ನೀಡುವ ಚಿಂತನೆ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ರಾಜ್ಯದಲ್ಲಿಯೇ ಡಿ.ಸಿ.ಸಿ. ಬ್ಯಾಂಕ್ ಉತ್ತಮವಾಗಿ ಬೆಳೆವಣಿಗೆ ಕಂಡಿದೆ. ಜಿಲ್ಲೆಯಲ್ಲಿ ಅದರಲ್ಲೂ ಸುಳ್ಯ ತಾಲೂಕು ಅತಿ ಹೆಚ್ಚು ಕೃಷಿ ಸಾಲ ಪಡೆಯುವ ಕೃಷಿಕರಿದ್ದಾರೆ. ಅಲ್ಲದೇ ಕೃಷಿ ಸಾಲ ಮರುಪಾವತಿ ಮಾಡುವುದರಲ್ಲೂ ಸುಳ್ಯ ಮೊದಲನೆಯ ಸ್ಥಾನದಲ್ಲಿದೆ. ಕೇವಲ 12 ಗಂಟೆಯಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಸರಕಾರಿ ಸಂಘಗಳ ಮೂಲಕ ಜಾರಿಗೆ ತಂದಿದ್ದೇವೆ. ಯಾರು ಕೂಡ ಸಹಕಾರಿ ಸಂಘಗಳಲ್ಲಿ ಹಣವನ್ನು ಠೇವಣಿ ಇಡಲು ಭಯ ಪಡಬೇಡಿ ಅದಕ್ಕೆ ಭದ್ರತೆಯನ್ನು ಡಿಸಿಸಿ ಬ್ಯಾಂಕ್ ನೀಡುತ್ತದೆ. ಡಿಸಿಸಿ ಬ್ಯಾಂಕ್ ಮತ್ತು ನವೋದಯ ಸಂಘಗಳಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಸಮವಸ್ತ್ರವನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ನವೋದಯ ಸಂಘದ ಸದಸ್ಯರಿಗೆ 7 ಲಕ್ಷ ಸಾರಿಗಳ ವಿತರಣೆ ಮಾಡಲಿದ್ದೇವೆ ಎಂದು ಹೇಳಿದರು.
ಬ್ಯಾಂಕಿನ ಗಣಕೀಕರಣದ ಉದ್ಘಾಟನೆಯನ್ನು ಮುರುಳ್ಯ ಎಣ್ಮೂರು ಸಹಕಾರ ಸಂಘದ ಅಧ್ಯಕ್ಷ ವಸಂತ ಗೌಡ ಹುದೇರಿ ನೆರವೇರಿಸಿದರು. ಭದ್ರತಾ ಕೋಶವನ್ನು ಮುರುಳ್ಯ ಗ್ರಾ.ಪಂ. ಅದ್ಯಕ್ಷೆ ಜಾನಕಿ ಮುರುಳ್ಯ ಉದ್ಘಾಟಿಸಿದರು. ಧರ್ಮಶ್ರೀ ಆರ್ಕೇಡ್ ಮಾಲಕ ಉದ್ಯಮಿ ಎಂ.ಮಾಧವ ಗೌಡ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪಂಬೆತ್ತಾಡಿ ಸಹಕಾರ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ, ಐವರ್ನಾಡು ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಮಂಡೆಕೋಲು ಸೊಸೈಟಿ ಅಧ್ಯಕ್ಷ ರಾಮಕೃಷ್ಣ ರೈ, ಎಡಮಂಗಲ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೇಂಗ್ರಿ, ಪಂಜ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಬೆಳ್ಳಾರೆ ಸೊಸೈಟಿ ಅಧ್ಯಕ್ಷ ಅನಿಲ್ ರೈ ಬೆಳ್ಳಾರೆ, ಸಂಪಾಸೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್, ಕಳಂಜ ಸೊಸೈಟಿ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಬರಡ್ಕ ಸಹಕಾರ ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ, ಕೊಲ್ಲಮೊಗ್ರ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಡಿ.ಸಿ.ಸಿ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ. ಬಿ, ಶಾಖಾ ವ್ಯವಸ್ಥಾಪಕಿ ಸುಧಾ ಹಿಮಾಕರ್ ಉಪಸ್ಥಿತರಿದ್ದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಲ್ಯೋಟ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ವಂದಿಸಿದರು. ಆದ್ಯ ಪ್ರಾರ್ಥಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







