ಅಸಾನಿ ಚಂಡಮಾರುತ, ವ್ಯಾಪಕ ಮಳೆ ನಿರೀಕ್ಷೆ: ಭಾರತದ ಹವಾಮಾನ ಇಲಾಖೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಸ್ಥಿತಿ ಇದೀಗ ಈಶಾನ್ಯ ಭಾಗದತ್ತ ಚಲಿಸಿದ್ದು, ಮಾರ್ಚ್ 20ರಂದು ವಾಯುಭಾರ ಕುಸಿತ ಮತ್ತಷ್ಟು ತೀವ್ರಗೊಳ್ಳಲಿದ್ದು, ಮಾರ್ಚ್ 21ರ ವೇಳೆಗೆ ಅಸಾನಿ ಚಂಡಮಾರುತವಾಗಿ ರೂಪುಗೊಳ್ಳಲಿದೆ ಎಂದು ಭಾರತದ ಹವಾಮಾನ ಇಲಾಖೆ ಅಂದಾಜಿಸಿದೆ.
ಇದು ಈಶಾನ್ಯಾಭಿಮುಖವಾಗಿ ಚಲಿಸಿ ಉತ್ತರ ಮ್ಯಾನ್ಮಾರ್ ಮತ್ತು ಆಗ್ನೇಯ ಬಾಂಗ್ಲಾದೇಶ ಕರಾವಳಿಯನ್ನು ಮಾರ್ಚ್ 22ರ ವೇಳೆಗೆ ತಲುಪುವ ನಿರೀಕ್ಷೆ ಇದೆ ಎಂದು ಶನಿವಾರ ಬಿಡುಗಡೆ ಮಾಡಿರುವ ಬುಲೆಟಿನ್ನಲ್ಲಿ ವಿವರಿಸಿದೆ. ಇದರ ಪರಿಣಾಮವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
"ಹವಾಮಾನ ಪರಿಸ್ಥಿತಿಯಲ್ಲಿ ಮಾರ್ಚ್ ಚಂಡಮಾರುತದ ಅವಧಿಯಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯವಾಗಿ ಚಂಡಮಾರುತ ಬೀಸುತ್ತದೆ. ಸಾಗರ ಮಾರ್ಚ್ನಲ್ಲಿ ತಂಪಾಗಿದ್ದು, ಸೂರ್ಯ ರಶ್ಮಿ ತೀವ್ರವಾಗಿರುವುದಿಲ್ಲ. ಮಾರ್ಚ್ನಲ್ಲಿ ಪಶ್ಚಿಮಾಭಿಮುಖ ಮಾರುತ ವ್ಯವಸ್ಥೆ ಪ್ರಮುಖವಾಗಿ ಭಾರತದ ಉತ್ತರ ಭಾಗದಲ್ಲಿ ಇರುತ್ತದೆ. ಪೂರ್ವಮಾರುತಗಳು ಪರ್ಯಾಯದ್ವೀಪ ಪ್ರದೇಶಗಳಲ್ಲಿ ಪ್ರಧಾನವಾಗಿರುತ್ತದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಅಸಾನಿ ಭೂಸ್ಪರ್ಷ ವೇಳೆಗೆ ದುರ್ಬಲವಾಗಿರಬಹುದು. ಆದರೆ ಅದರ ತೀವ್ರತೆ ಚಂಡಮಾರುತದ್ದಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಸನಿಹದಲ್ಲಿರುತ್ತದೆ. ಆದ್ದರಿಂದ ಭಾರಿ ಗಾಳಿ ಮತ್ತು ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.







