ಮಣಿಪುರ ಮುಖ್ಯಮಂತ್ರಿ ಹುದ್ದೆಗೆ ಬಿರೇನ್ ಸಿಂಗ್ -ಬಿಸ್ವಜಿತ್ ಸಿಂಗ್ ನಡುವೆ ಆಂತರಿಕ ಕಲಹ: ಮೂರನೇ ಆಯ್ಕೆಯತ್ತ ಬಿಜೆಪಿ

ಖೇಮ್ಚಂದ್ ಸಿಂಗ್
ಇಂಫಾಲ: ಮಣಿಪುರದಲ್ಲಿ ಮುಖ್ಯಮಂತ್ರಿ ಗಾದಿಗೆ ಆರೆಸ್ಸೆಸ್ ಬೆಂಬಲಿತ ನಾಯಕ, ಹಿಂದಿನ ಅಸೆಂಬ್ಲಿಯಲ್ಲಿ ಸ್ಪೀಕರ್ ಆಗಿದ್ದ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಶನಿವಾರ ಬಿಜೆಪಿ ನಾಯಕತ್ವವು ದಿಲ್ಲಿಗೆ ಕರೆಸಿಕೊಂಡಿದೆ. ಹಂಗಾಮಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹಾಗೂ ಬಿಸ್ವಜಿತ್ ಸಿಂಗ್ ನಡುವೆ ಸಿಎಂ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿರುವಾಗ ಸಿಎಂ ಹುದ್ದೆಗೆ ಬಿಜೆಪಿ ಮೂರನೇ ಆಯ್ಕೆಯತ್ತ ಗಮನ ಹರಿಸಿದೆ.
ಬಿರೇನ್ ಸಿಂಗ್ ಹಾಗೂ ಬಿಸ್ವಜಿತ್ ಸಿಂಗ್ ನಡುವಿನ ಆಂತರಿಕ ಕಲಹವನ್ನು ತಪ್ಪಿಸಲು ಆರೆಸ್ಸೆಸ್ ಬೆಂಬಲಿತ ನಾಯಕ ಬಿಜೆಪಿಗೆ ಮತ್ತೊಂದು ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಕಿರಣ್ ರಿಜಿಜು ರವಿವಾರ ಮಣಿಪುರದ ರಾಜಧಾನಿ ಇಂಫಾಲ್ಗೆ ಹೋಗುತ್ತಿದ್ದು, ಅಲ್ಲಿ ಅವರು ಈಶಾನ್ಯ ರಾಜ್ಯದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಆಯ್ಕೆಯನ್ನು ಘೋಷಿಸುವ ಸಾಧ್ಯತೆಯಿದೆ.
ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮಣಿಪುರದಲ್ಲಿ ಅಧಿಕಾರ ಉಳಿಸಿಕೊಂಡಿತ್ತು. ಬಿಜೆಪಿ ಮಣಿಪುರದಲ್ಲಿ ಸತತ ಎರಡನೇ ಅವಧಿಗೆ ಆಯ್ಕೆಯಾಗಿದೆ.
ಶನಿವಾರ ದಿಲ್ಲಿಯಲ್ಲಿ ಬಿಜೆಪಿ ನಾಯಕತ್ವವು ಬಿರೇನ್ ಸಿಂಗ್ ಹಾಗೂ ಬಿಸ್ವಜಿತ್ ಸಿಂಗ್ ಅವರನ್ನು ಭೇಟಿ ಮಾಡಿತ್ತು. ಇಬ್ಬರೂ ಕೂಡ ಇಂದು ಇಂಫಾಲಕ್ಕೆ ತೆರಳಿದ್ದಾರೆ.
ಮಣಿಪುರದಲ್ಲಿ ಪಕ್ಷದ ಕೇಂದ್ರ ವೀಕ್ಷಕರಾಗಿರುವ ಇಬ್ಬರು ಕೇಂದ್ರ ಸಚಿವರು ಇಂದು ಇಂಫಾಲ್ನಲ್ಲಿ ಸ್ಥಳೀಯ ಮುಖಂಡರನ್ನು ಭೇಟಿಯಾಗಲಿದ್ದು ನಂತರ ಅವರು ತಮ್ಮ ಮುಖ್ಯಮಂತ್ರಿ ಆಯ್ಕೆಯನ್ನು ಘೋಷಿಸುವ ಸಾಧ್ಯತೆಯಿದೆ.
ಬಿಜೆಪಿ ಕೇಂದ್ರ ನಾಯಕತ್ವವು ಬಿರೇನ್ ಸಿಂಗ್ ಹಾಗೂ ಬಿಸ್ವಜಿತ್ ಸಿಂಗ್ ಇಬ್ಬರ ಮಾತನ್ನೂ ಸುದೀರ್ಘವಾಗಿ ಆಲಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯು ಮಣಿಪುರದಲ್ಲಿಚುನಾವಣೆಯ ವೇಳೆ ಮುಖ್ಯಮಂತ್ರಿಯ ಅಭ್ಯರ್ಥಿಯನ್ನು ಔಪಚಾರಿಕವಾಗಿ ಘೋಷಿಸದಿದ್ದರೂ, ರಾಜ್ಯಾದ್ಯಂತ ಪ್ರಚಾರ ಮಾಡಿದ ಬಿರೇನ್ ಸಿಂಗ್ ಅವರ ನೇತೃತ್ವದಲ್ಲಿ ಪಕ್ಷವು ಚುನಾವಣೆಯನ್ನು ಎದುರಿಸಿತು.







