ಉದ್ಯೋಗ ನೇಮಕಾತಿಗಾಗಿ ‘ಶಿಫಾರಸು’ ಮಾಡದಿರಿ: ಆಪ್ ಶಾಸಕರಿಗೆ ಸಿಎಂ ಮಾನ್ ಖಡಕ್ ಸೂಚನೆ

photo courtesy:twitter
ಮೊಹಾಲಿ,ಮಾ.20: ರಾಜ್ಯದ ಜನತೆಯ ಅಭ್ಯುದಯಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಆಮ್ಆದ್ಮಿ ಪಕ್ಷ (ಎಎಪಿ)ದ ಶಾಸಕರಿಗೆ ಕರೆ ನೀಡಿದ್ದಾರೆ. ಖಾಲಿ ಬಿದ್ದಿರುವ ಹುದ್ದೆಗಳಿಗೆ ತಮಗೆ ಬೇಕಾದವರನ್ನು ನೇಮಿಸುವುದಕ್ಕಾಗಿ ಯಾವುದೇ ರೀತಿಯ ಶಿಫಾರಸುಗಳನ್ನು ತನ್ನ ಬಳಿಗೆ ತರಬಾರದೆಂದು ಮಾನ್ ಅವರು ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ.
ಪಕ್ಷದ ಶಾಸಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ‘‘ಈ ಹುದ್ದೆಗಳಿಗಾಗಿ ಹಲವಾರು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ಆದರೆ ಯಾವುದೇ ಶಿಫಾರಸುಗಳನ್ನು ಮಾಡುವುದರಿಂದ ದೂರವಿರಿ. ಆಮ್ ಆದ್ಮಿ ಪಕ್ಷದ ಸರಕಾರದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ’’ ಎಂದು ಮಾನ್ ಹೇಳಿದರು.
ಶನಿವಾರ ನಡೆದ ಚೊಚ್ಚಲ ಸಂಪುಟ ಸಭೆಯಲ್ಲಿ ಮಾನ್ ಅವರು ಪೊಲೀಸ್ ಸೇರಿದಂತೆ ಪಂಜಾಬ್ ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ 25 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಗಳಲ್ಲಿ ಆಮ್ಆದ್ಮಿ ಪಕ್ಷವು ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಾಗಿ ಪ್ರಸ್ತಾಪ ಮಾಡಿತ್ತು. ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರ ನೇರವಾಗಿ ತನಗೆ ವಾಟ್ಸಾಪ್ ಮೂಲಕ ದೂರು ನೀಡುವುದಕ್ಕೆ ಅವಕಾಶ ನೀಡಲು ಮಾರ್ಚ್ 23ರಿಂದ ಸಹಾಯವಾಣಿಯನ್ನು ತನ್ನ ಸರಕಾರ ಆರಂಭಿಸಲಿದೆಯೆಂದು ಮಾನ್ ಇತ್ತೀಚೆಗೆ ಪ್ರಕಟಿಸಿದ್ದರು.







