ಅಪ್ಪು ನೆನೆದು ಕಣ್ಣೀರು ಹಾಕುವ ಬದಲು ಗಿಡ ನೆಡಿ: ಅಭಿಮಾನಿಗಳಿಗೆ ರಾಘವೇಂದ್ರ ರಾಜ್ಕುಮಾರ್ ಕರೆ

ಬೆಂಗಳೂರು, ಮಾ. 20: ‘ಅಪ್ಪು'ನನ್ನು ನೆನೆದು ಅಭಿಮಾನಿಗಳು ಕಣ್ಣೀರು ಹಾಕುವುದು ಬೇಡ. ಅದರ ಬದಲಿಗೆ ಅಪ್ಪು ಹೆಸರಿನಲ್ಲಿ ಎಲ್ಲರೂ ಒಂದೊಂದು ಗಿಡ ನೆಡಿ. ಆ ಮೂಲಕ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗೋಣ’ ಎಂದು ನಟ ರಾಘವೇಂದ್ರ ರಾಜ್ಕುಮಾರ್ ಕರೆ ನೀಡಿದ್ದಾರೆ.
ರವಿವಾರ ಅದಮ್ಯ ಚೇತನ ಸಂಸ್ಥೆ ವತಿಯಿಂದ ಎಚ್ಎಸ್ಆರ್ ಲೇಔಟ್ನಲ್ಲಿರುವ ಸ್ವಾಭಿಮಾನ ಪಾರ್ಕ್ನಲ್ಲಿ ಕೇಂದ್ರ ಮಾಜಿ ಸಚಿವ ಅನಂತಕುಮಾರ್ ನೆನಪಿನಲ್ಲಿ ಮತ್ತು ನಟ ಡಾ.ಪುನೀತ್ ರಾಜ್ಕುಮಾರ್ ಜನ್ಮ ದಿನದ ಸ್ಮರಣಾರ್ಥವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭೂಮಿಯನ್ನು ಮನುಷ್ಯ ತನ್ನದು ಎಂದುಕೊಂಡಿದ್ದಾನೆ. ಆದರೆ ಈ ಭೂಮಿಯ ಮೇಲೆ ಕೋಟ್ಯಾಂತರ ಜೀವರಾಶಿಗಳಿವೆ. ಅವುಗಳನ್ನು ತಮ್ಮದೆಂದು ಭಾವಿಸಿ ಅವುಗಳ ಉಳಿವಿಗೆ ಅನುವು ಮಾಡಿಕೊಡುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.
‘ಈವರೆಗೆ ಸಿನಿಮಾ ನೋಡಿ ಸಹಕರಿಸುತ್ತಿದ್ದ ಅಭಿಮಾನಿಗಳು ಗಿಡ ನೆಡುವ ಕಾರ್ಯಕ್ಕೂ ಸಹಕಾರ ನೀಡಬೇಕು. ಇಂದಿನ ಸಮಾಜಕ್ಕೆ ಪರಿಸರದ ಅಗತ್ಯವೂ ಇದೆ. ಎಲ್ಲ ಸೇವೆಗಳಿಗಿಂತ ಪರಿಸರ ಕಾಪಾಡುವುದು ದೊಡ್ಡ ಸೇವೆ. ಇದನ್ನು ಅದಮ್ಯ ಚೇತನ ಹಲವು ವರ್ಷಗಳಿಂದ ಮಾಡುತ್ತಾ ಬಂದಿರುವುದು ಆದರ್ಶವಾಗಿದೆ. ಇದರಿಂದ ಜನರಿಗೆ ನೆರಳು ಮಾತ್ರ ಕೊಡದೆ, ಪ್ರಾಣಿ-ಪಕ್ಷಿಗಳಿಂದ ಹಿಡಿದು ಸಕಲ ಜೀವರಾಶಿಗೂ ಇದು ನೆರವಾಗುತ್ತದೆ. ಹಾಗಾಗಿ ಅಭಿಮಾನಿಗಳೆಲ್ಲರೂ ಗಿಡ ನೆಟ್ಟು, ಅದಮ್ಯ ಚೇತನದ ಕೆಲಸಕ್ಕೆ ಕೈ ಜೋಡಿಸೋಣ’ ಎಂದರು.
‘ಈವರೆಗೆ ನಾವು ಸಿನಿಮಾ ಮಾಡುತ್ತಿದ್ದೆವು. ಅದು ನಮ್ಮ ಜೀವನಕ್ಕಾಗಿ ಮಾಡುತ್ತಿದ್ದೆವು. ಆದರೆ ಇದು ಸಮಾಜಕ್ಕಾಗಿ ಮಾಡುವಂಥದ್ದು. ನಮ್ಮ ತಂದೆಯವರು ಬಂಗಾರದ ಮನುಷ್ಯ, ಮಣ್ಣಿನ ಮಗನಂತಹ ಸಿನಿಮಾಗಳನ್ನು ಮಾಡಿದ್ದಾರೆ. ಅದರ ಉದ್ದೇಶ ಆಗ ಅರಿಯಲಿಲ್ಲ. ಏನೋ ಸಿನಿಮಾ ಅನ್ನುವ ರೀತಿ ಸ್ವೀಕರಿಸಿದೆವು. ಮಣ್ಣು, ಕೃಷಿಯನ್ನು ಕಾಪಾಡುವ, ಸಂರಕ್ಷಿಸುವ ಕೆಲಸ ಮಾಡಬೇಕು ಎಂಬ ಒಳ್ಳೆಯ ಸಂದೇಶವನ್ನು ಹೊತ್ತು ಆ ಸಿನಿಮಾಗಳನ್ನು ಮಾಡಿದರು. ಅದನ್ನು ಅರಿತು ನನ್ನ ಸೋದರ ಕೂಡ ಭೂಮಿಗೆ ಏನಾದರೂ ಮಾಡಬೇಕು ಎಂದು ಗಂಧದ ಗುಡಿ ಸಿನಿಮಾ ಮಾಡುತ್ತಿದ್ದು, ಅದು ತಯಾರಿ ಹಂತದಲ್ಲಿದೆ. ಅದು ಸಿದ್ಧವಾದ ನಂತರ ಒಂದು ದೊಡ್ಡ ಸಂದೇಶ ಈ ಸಮಾಜಕ್ಕೆ ಅದರಿಂದ ಸಿಗುತ್ತದೆ’ ಎಂದು ನುಡಿದರು.
ಅದಮ್ಯ ಚೇತನದ ಅಧ್ಯಕ್ಷೆ ಡಾ.ತೇಜಸ್ವಿನಿ ಮಾತನಾಡಿ, ಅನಂತಕುಮಾರ್ ಮತ್ತು ಪುನೀತ್ ಈ ಸಮಾಜದ ಎರಡು ಕಣ್ಣುಗಳಾಗಿದ್ದವು. ಅವುಗಳನ್ನು ಕಳೆದುಕೊಂಡಿದ್ದರೂ ಇದೀಗ ಮರ, ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಅವರ ಸೇವೆಯನ್ನು ಸಾರ್ಥಕಗೊಳಿಸಲು ಮುಂದಾಗಿದ್ದೇವೆ. ರಾಘವೇಂದ್ರ ರಾಜ್ಕುಮಾರ್ ಒಬ್ಬ ಕಾರ್ಯಕರ್ತನಾಗಿ ಬಂದು ಗಿಡ ನೆಟ್ಟಿದ್ದಾರೆ. ಅನಂತಕುಮಾರ್ಗೆ ರಾಜ್ ಕುಟುಂಬದ ಬಗ್ಗೆ ಒಳ್ಳೆಯ ಗೌರವ, ಅಭಿಮಾನ ಇತ್ತು. ರಾಜ್ಕುಮಾರ್ ಸೇರಿದಂತೆ ಅವರು ಕುಟುಂಬ ವರ್ಗ ಸಿನಿಮಾಗೆ ಮಾತ್ರ ಸೇವೆ ಸೀಮಿತಗೊಳಿಸಲಿಲ್ಲ. ಚಿತ್ರರಂಗದಲ್ಲಿರುವವರು ಸಮಾಜ ಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಅದಮ್ಯ ಚೇತನದ ವತಿಯಿಂದ ಬಿಸಿಯೂಟ ಕಾರ್ಯಕ್ರಮ ನಡೆಸುತ್ತಿದ್ದು, ಅಡುಗೆ ಮನೆಯಲ್ಲಿ ಅಕ್ಕಿ, ತರಕಾರಿ ತೊಳೆದ ನೀರನ್ನು ವ್ಯರ್ಥ ಮಾಡುವುದು ಬೇಡ ಎನಿಸಿ, ಅದನ್ನು ಡ್ರಮ್ಗೆ ತುಂಬಿಸಿಕೊಟ್ಟು ನಂತರ ಅದನ್ನು ಟ್ಯಾಂಕರ್ಗೆ ತುಂಬಿಸಿಕೊಂಡು ಗಿಡಗಳಿಗೆ ನೀರು ಹಾಕಲು ಹೋದೆವು. ಗಿಡಗಳೇ ಕಾಣಲಿಲ್ಲ. ಆಗಲೇ ಅದಮ್ಯ ಚೇತನದ ವತಿಯಿಂದ ಗಿಡಗಳನ್ನು ಬೆಳೆಸಬೇಕು ಎಂಬ ಆಲೋಚನೆ ಹುಟ್ಟಿತು. ಅಂದಿನಿಂದ ಅದಮ್ಯ ಚೇತನಕ್ಕೂ, ಗಿಡಗಳಿಗೂ ನಂಟು ಬೆಳೆಯಿತು ಎಂದು ಅಭಿಯಾನ ನಡೆದು ಬಂದ ಹಾದಿಯನ್ನು ಅವರು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಹಲವು ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು.
.jpg)







