ಸಂಪಾಜೆ: ಮನೆಮಂದಿಯನ್ನು ಬೆದರಿಸಿ ಚಿನ್ನಾಭರಣ, ನಗದು ದರೋಡೆ

ಸುಳ್ಯ, ಮಾ.21: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಮಂದಿಯನ್ನು ಮಚ್ಚು ತೋರಿಸಿ ಬೆದರಿಸಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ಸಂಪಾಜೆಯ ಚಟ್ಟೆಕಲ್ಲು ಎಂಬಲ್ಲಿ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಎಂಬುವವರ ಮನೆಯಿಂದ ಈ ದರೋಡೆ ನಡೆದಿದೆ.
100 ಗ್ರಾಂ. ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ 8:30ರ ವೇಳೆ ಅಂಬರೀಶ್ ಭಟ್ ಮತ್ತು ಪುತ್ರ ಶ್ರೀವತ್ಸ ಮನೆಯಲ್ಲಿ ಇರಲಿಲ್ಲ. ಮಹಿಳೆಯರು ಮಾತ್ರ ಮನೆಯಲ್ಲಿದ್ದರು.ಈ ಸಂದರ್ಭದಲ್ಲಿ ಕಳ್ಳರ ತಂಡ ಮನೆಗೆ ನುಗ್ಗಿದೆ. ಮಚ್ಚು ತೋರಿಸಿ ಬೆದರಿಸಿದ ದರೋಡೆಕೋರರು ಶ್ರೀವತ್ಸ ಅವರ ಪತ್ನಿಯ ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ ಮತ್ತು ಕಪಾಟಿನ ಕೀಲಿ ಕೈ ಅದರಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಂಡಗಳು ತನಿಖೆ ನಡೆಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.