ಆನೇಕಲ್: ಪತ್ನಿಯ ಕತ್ತು ಕೊಯ್ದು ಕೊಲೆ; ಪತಿ ಆತ್ಮಹತ್ಯೆಗೆ ಯತ್ನ
ಲಾವಣ್ಯಾ, ಸಂಪತ್
ಆನೇಕಲ್, ಮಾ.21: ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿ ಪತಿಯೂ ಕತ್ತು ಕೊಯ್ದುಕೊಂಡ ಘಟನೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಇಂದು ಮುಂಜಾನೆ ನಡೆದಿರುವುದು ವರದಿಯಾಗಿದೆ.
ಯಡವನಹಳ್ಳಿ ನಿವಾಸಿ ಲಾವಣ್ಯಾ(30) ಕೊಲೆಯಾದವರು. ಅವರ ಪತಿ ಸಂಪತ್ ಕೊಲೆ ಆರೋಪಿಯಾಗಿದ್ದಾನೆ.
ಕುಡಿತದ ಚಟ ಹೊಂದಿದ್ದ ಸಂಪತ್ ಮನೆಯಲ್ಲಿ ಪದೇಪದೇ ಗಲಾಟೆ ಮಾಡುತ್ತಿದ್ದನೆನ್ನಲಾಗಿದೆ. ಕಳೆದ ಹತ್ತು ದಿನಗಳಿಂದ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿದ್ದು, ಈ ವಿಚಾರವಾಗಿ ಲಾವಣ್ಯಾ ಮನೆಯವರು ರವಿವಾರ ರಾಜಿ ಪಂಚಾಯಿತಿಕೆ ಮಾಡಿದ್ದರು.
ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಮಲಗಿದ್ದ ಲಾವಣ್ಯಾರ ಕತ್ತನ್ನು ಚಾಕುವಿನಿಂದ ಕೊಯ್ದ ಕೊಲೆ ಮಾಡಲಾಗಿದೆ. ಈ ವೇಳೆ ತಡೆಯಲೆತ್ನಿಸಿದ ಮಗ ಭಾರ್ಗವ್(10)ನ ಕೈಗೂ ಗಾಯಗಳಾಗಿವೆ. ಬಳಿಕ ಆರೋಪಿ ಸಂಪತ್ ತನ್ನ ಕತ್ತು ಕೊಯ್ದುಕೊಂಡು ಮನೆಯ ಮೊದಲ ಮಹಡಿಯಿಂದ ಕೆಳಗೆ ಬಂದಿದ್ದು, ಮನೆಯ ಎದುರಿನ ಚರಂಡಿ ಬಳಿ ಒದ್ದಾಡುತ್ತಿದ್ದನೆನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಗಂಭೀರಾವಸ್ಥೆಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಂಪತ್ ಹಾಗೂ ಲಾವಣ್ಯಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಎಂ.ಮಲ್ಲೇಶ್, ಅತ್ತಿಬೆಲೆ ಪಿಐ ಕೆ.ವಿಶ್ವನಾಥ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.