ಗುಣಮಟ್ಟದ ತಾಜಾ ಮೀನು, ಮೀನಿನ ಖಾದ್ಯಗಳು ಜನರ ಮನೆಬಾಗಿಲಿಗೆ: ಸಚಿವ ಎಸ್.ಅಂಗಾರ

ಬೆಂಗಳೂರು, ಮಾ. 21: ‘ಕಬ್ಬನ್ ಪಾರ್ಕಿನ ಮತ್ಸ್ಯದರ್ಶಿನಿ ಕ್ಯಾಂಟೀನ್ನ ಆರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ತಾಜಾ ಮೀನು ಮತ್ತು ಮೀನಿನ ಖಾದ್ಯ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಮನೆಬಾಗಿಲಿಗೆ ತಲುಪಿಸಲಾಗುವುದು' ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಕಬ್ಬನ್ಪಾರ್ಕ್ ಆವರಣದಲ್ಲಿರುವ ಮತ್ಸ್ಯದರ್ಶಿನಿ ಕ್ಯಾಂಟೀನ್ನಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದಿಂದ ಏರ್ಪಡಿಸಿದ್ದ ಆನ್ಲೈನ್ ಮೀನು ಮಾರಾಟ ಜಾಲತಾಣ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ಪೌಷ್ಠಿಕಾಂಶ ಕಡಿಮೆಯಾಗಿ ವಿವಿಧ ರೋಗಗಳಿಗೆ ತುತ್ತಾಗುವ ಸಂದರ್ಭಗಳಿವೆ. ಮೀನು ಒಂದು ಉತ್ತಮ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥವಾಗಿದ್ದು, ಇದರ ಸೇವನೆಯಿಂದ ದೇಹಕ್ಕೆ ಬೇಕಾಗುವ ಉತ್ತಮ ಪೌಷ್ಠಿಕಾಂಶಗಳು ದೊರಕುವುದು ಎಂದು ತಿಳಿಸಿದರು.
‘ಮೀನುಗಾರಿಕೆ ಇಲಾಖೆಯು ಅನೇಕ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಇತ್ತೀಚಿನ ನವ ಮಾಧ್ಯಮದ ಯುಗದಲ್ಲಿ ಆ್ಯಪ್ ಬಳಸಿಕೊಂಡು, ಜನರಿಗೆ ಸುಲಭವಾಗಿ ಮೀನು ತಲುಪಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಬೇಕು. ಮೀನು ಕೆಟ್ಟು ಹೋಗುವ ವಸ್ತು ಆಗಿದ್ದು, ಮೀನಿನ ಗುಣಮಟ್ಟ ಕಾಪಾಡಬೇಕಾಗುತ್ತದೆ. ಈಗಿನ ತಾಂತ್ರಿಕತೆಯನ್ನು ಬಳಸಿಕೊಂಡು ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಮಾಡಬೇಕಾಗಿದೆ. 24 ಏಜೆನ್ಸಿ ತಂಡಗಳು ಇಲಾಖೆ ವ್ಯಾಪ್ತಿಯಲ್ಲಿ ಮೀನಿನ ವಿತರಣೆ ಮತ್ತು ಮೀನಿನ ಉತ್ಪನ್ನಗಳನ್ನು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತವೆ. ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಕ್ಕೆ ಇಂಧನದ ಕೊರತೆ ಎದುರಾಗಬಾರದೆಂಬ ದೃಷ್ಟಿಯಿಂದ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುವುದು ಎಂದು ಹೇಳಿದರು.
ಮೀನು ಮತ್ತು ಮೀನಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಅತ್ಯಂತ ಸುಲಭದಲ್ಲಿ ಸಾರ್ವಜನಿಕರಿಗೆ ಒದಗಿಸಲು ಕ್ರಮವಹಿಸಲಾಗುವುದು. ಅಭಿವೃದ್ಧಿ ನಿಗಮಗಳು ಸ್ವಂತ ಕಾಲದ ಮೇಲೆ ನಿಲ್ಲಬೇಕು. ವಿವಿಧ ಯೋಜನೆಗಳ ಮೂಲಕ ಜನರಿಗೆ ಸೌಲಭ್ಯವನ್ನು ಒದಗಿಸಬೇಕು. ಆಗ ಸಂಸ್ಥೆಯ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದು ಅವರು ತಿಳಿಸಿದರು.
ಜನಸಂಖ್ಯೆ ಮತ್ತು ನಿರುದ್ಯೋಗವು ದೇಶದ ದೊಡ್ಡ ಸಮಸ್ಯೆಯಾಗಿದೆ. ನಿರುದ್ಯೋಗಿ ಯುವಕರಿಗೆ ಸ್ವ-ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಿಗಮಗಳು ಕಾರ್ಯನಿರ್ವಹಿಸಬೇಕಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ 3 ಚಕ್ರದ ವಾಹನಗಳು ಹಾಗೂ 4 ಚಕ್ರದ ವಾಹನಗಳಲ್ಲಿ ಕೋಲ್ಡ್ ಸ್ಟೋರೇಜ್ ಅಳವಡಿಸಿಕೊಂಡಿರುವ ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಅಂಗಾರ ತಿಳಿಸಿದರು.
‘ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಸುಮಾರು 24ಕ್ಕೂ ಅಧಿಕ ಬಂದರುಗಳಲ್ಲಿ ಮೀನುಗಾರಿಕೆ ನಡೆಯುತ್ತಿದ್ದು, ಶೇ.30ಕ್ಕೂ ಅಧಿಕ ಮೀನುಗಳನ್ನು ರಫ್ತು ಮಾಡಲಾಗುತ್ತದೆ. ರಾಜ್ಯದ ಒಟ್ಟು ಮೀನು ಉತ್ಪಾದನೆಯ ಪೈಕಿ 3.47 ಲಕ್ಷ ಮೆಟ್ರಿಕ್ ಟನ್ ಕಡಲ ಮೀನುಗಾರಿಕೆಯಿಂದ ಬರುತ್ತಿದೆ. ಈ ಪೈಕಿ 1.05 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮೀನುಗಾರಿಕೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮೀನು ಮತ್ತು ಮೀನಿನ ಉತ್ಪನ್ನಗಳ ಆನ್ಲೈನ್ ಮಾರಾಟವು ಪ್ರಮುಖವಾಗಲಿದ್ದು ಆನ್ಲೈನ್ ಲಿಂಕ್ಗಳ ಮಾರುಕಟ್ಟೆಯನ್ನು ತೆರೆಯುವ ಮೂಲಕ ಮೀನುಗಾರಿಕೆಯನ್ನು ಬೃಹತ್ ಉದ್ಯಮವಾಗಿ ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕಾ ನಿರ್ದೇಶಕ(ಪ್ರಭಾರ) ಎಂ.ಎಲ್.ದೊಡ್ಡಮನಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್, ಆನಂದ್ ಖಾರ್ವಿ, ಕೃಷ್ಣಮೂರ್ತಿ ಹಾಗೂ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.







