ಮಣಿಪಾಲ: ಶಿಕ್ಷಣ ಹಕ್ಕು ಕಾಯಿದೆ ಕಾರ್ಯಾಗಾರ

ಮಣಿಪಾಲ : ನಗರಾಡಳಿತ ಪ್ರದೇಶದಲ್ಲಿರುವ ಮಕ್ಕಳಿಗೆ ಮಕ್ಕಳ ಹಕ್ಕುಗಳನ್ನು ಅನುಭವಿಸಲು ಇರುವ ಕೊರತೆಗಳನ್ನು ನೀಗಿಸಿ ಎಲ್ಲಾ ಮಕ್ಕಳಿಗೂ ಸಂವಿಧಾನಿಕ ಆಶಯದಂತೆ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಬೇಕು. ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಬಂಡಿಕೆಯನ್ನು ಸಾಕಾರಗೊಳಿಸುವಲ್ಲಿ ನಗರ ಪ್ರದೇಶದ ಮಕ್ಕಳಿಗೂ ಅವರ ರಕ್ಷಣೆ, ಶಿಕ್ಷಣ ಮತ್ತು ಭಾಗವಹಿಸುವಿಕೆಯ ಹಕ್ಕನ್ನು ಪಡೆಯಲು ವ್ಯವಸ್ಥೆಗಳ ಲಭ್ಯತೆಯ ಒದಗಣೆ ಅತೀ ಅಗತ್ಯ. ಇಂತಹ ಕೆಲಸದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಸಹಕಾರ ನೀಡಲು ಸಿದ್ಧವಿದೆ ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶರಾದ ಶರ್ಮಿಳಾ ಎಸ್. ಹೇಳಿದ್ದಾರೆ.
ಪಡಿ ಸಂಸ್ಥೆ ಮಂಗಳೂರು ಮತ್ತು ಮಣಿಪಾಲ ಮಾಹೆಯ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ಎಂಎಸ್ಡಬ್ಲ್ಯೂ ಪ್ರೋಗ್ರಾಮ್ನ ಸಹಯೋಗದಲ್ಲಿ ನಡೆದ ಶಿಕ್ಷಣ ಹಕ್ಕು ಕಾಯಿದೆ-೨೦೦೯ರ ಅನುಷ್ಠಾನದಲ್ಲಿ ನಗರ ಸ್ಥಳೀಯ ಆಡಳಿತದಲ್ಲಿರುವ ಅವಕಾಶಗಳು ಮತ್ತು ಸವಾಲುಗಳು ಕುರಿತ ಅಂತರ್ ಜಿಲ್ಲಾ ಮಟ್ಟದ ಚಿಂತನ-ಮಂಥನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮಣಿಪಾಲದಲ್ಲಿ ಮಾಹೆ ವಿವಿ ಆಶ್ರಯದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಶರ್ಮಿಳಾ ಅವರು ಅಂತರಜಿಲ್ಲಾ ಮಟ್ಟದ ಸುಸ್ಥಿರ ಅಭಿವೃದ್ಧಿಯ ೧೭ ಗುರಿಗಳಿಗೆ ಸಂಬಂಧಿಸಿದಂತೆ ಮಾಹಿತಿಯುಳ್ಳ ಗೋಡೆ ಪತ್ರಿಕೆಯನ್ನು ಬಿಡುಗಡೆಗೊಳಿಸುವ ಮೂಲಕ ಕಾರ್ಯಗಾರಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಹಾಗೂ ಎಂಎಸ್ಡಬ್ಲ್ಯೂ ಪ್ರೋಗ್ರಾಮ್ನ ಮುಖ್ಯಸ್ಥರಾದ ಡಾ. ಲೀನಾ ಅಶೋಕ್ ಮಾತನಾಡಿ, ಸರಕಾರವು ಹೊಸ ಶಿಕ್ಷಣ ನೀತಿ ಹಾಗೂ ಅದರ ಮೊದಲೇ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ್ದು ಎಲ್ಲಾ ಮಕ್ಕಳಿಗೂ ಇವುಗಳ ಪ್ರಯೋಜನ ಸಿಗುವಲ್ಲಿ ವಿವಿಧ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಅಗತ್ಯವೆಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಚಂದ್ರನಾಯಕ್ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಟಾನದಲ್ಲಿರುವ ಸವಾಲುಗಳ ಪರಿಹಾರೋಪದ ಕಾರ್ಯಚಟುವಟಿಕೆಗಳಲ್ಲಿ ಶಿಕ್ಷಣ ಇಲಾಖೆಯ ಸಹಕಾರ ಪಡಿ ಸಂಸ್ಥೆಯ ಜೊತೆಗಿರುತ್ತದೆ ಎಂದು ಭರವಸೆ ನೀಡಿದರು.
ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ ಕಾಯಾಗಾರದ ಉದ್ದೇಶ ಮತ್ತು ಆ ಮೂಲಕ ನಗರ ಪ್ರದೇಶದ ಮಕ್ಕಳ ಹಕ್ಕುಗಳ ಭಾಗವಹಿಸುವಿಕೆಯ ಅಗತ್ಯತೆಯಲ್ಲಿ ಇರುವ ಕೊರತೆಗಳ ನಿವಾರಣೆಯ ಅಗತ್ಯದ ಬಗ್ಗೆ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಮಾಲೋಚನಾ ಕಾರ್ಯಾಗಾರದ ಸಮನ್ವಯಕಾರ ಹಾಗೂ ಸಾಮಾಜಿಕ ಚಿಂತಕ ಗುರುರಾಜ್ ಬುಧ್ಯ, ಸಂಪನ್ಮೂಲ ವ್ಯಕ್ತಿ ಸದಾನಂದ ಉಪಸ್ಥಿತರಿದ್ದರು. ಪಡಿ ಸಂಸ್ಥೆಯ ತರಬೇತು ಸಂಯೋಜಕರಾದ ಕಸ್ತೂರಿ ಆರ್. ಸ್ವಾಗತಿಸಿ, ಕಾಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಸಂಯೋಜಕರಾದ ವಿವೇಕ್ ವಂದಿಸಿದರು.