ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಗ್ಗೇಜ್ ತಪಾಸಣೆಯ ನೆಪದಲ್ಲಿ ಮಾನಸಿಕ ಹಿಂಸೆ: ಅರೋಪ
ʼಬೆಲೆಬಾಳುವ ವಸ್ತುಗಳು ಚೆಲ್ಲಾಪಿಲ್ಲಿʼ
ಮಂಗಳೂರು : ಲಗ್ಗೇಜ್ ತಪಾಸಣೆಯ ನೆಪದಲ್ಲಿ ಬೆಲೆಬಾಳುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿ, ಸಿಬ್ಬಂದಿ ವರ್ಗದ ವಿರುದ್ಧ ಪ್ರಯಾಣಿಕರು ಆರೋಪಿಸಿದ್ದಾರೆ.
ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿ ಎರಡ್ಮೂರು ವರ್ಷ ಕಷ್ಟಪಟ್ಟು ದುಡಿದ ಹಣದಿಂದ ಮನೆ ಮಂದಿಗೆ ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿ ತಂದ ವಸ್ತುಗಳನ್ನು ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳು ತಪಾಸಣೆಯ ನೆಪದಲ್ಲಿ ಲಗ್ಗೇಜ್ ಬಿಚ್ಚಿ ಪರಿಶೀಲಿಸಿದ್ದಾರೆ. ಅದರಲ್ಲಿರುವ ಬೆಲೆಬಾಳುವ ವಸ್ತುಗಳ ಸಹಿತ ಎಲ್ಲವನ್ನೂ ಹೊರಗೆಳೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮಳೆನೀರಿಗೆ ಲಗ್ಗೇಜ್ ಒದ್ದೆಯಾಗಿದ್ದರೂ ಅಧಿಕಾರಿ, ಸಿಬ್ಬಂದಿ ವರ್ಗವು ಅದನ್ನು ಸಂರಕ್ಷಿಸಲು ಮುಂದಾಗಿಲ್ಲ ಎಂದು ಪ್ರಯಾಣಿಕರು ರವಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ʼವಾರ್ತಾಭಾರತಿʼಯೊಂದಿಗೆ ಅಳಲು ತೋಡಿಕೊಂಡರು.
ವಿದೇಶದಿಂದ ರವಿವಾರ ಬೆಂಗಳೂರಿಗೆ ಬಂದ ನಮ್ಮನ್ನು ಸುಮಾರು ಒಂದುವರೆ ಗಂಟೆಯ ಕಾಲ ನಮ್ಮನ್ನು ವಿಮಾನದಲ್ಲೇ ಕುಳ್ಳಿರಿಸಿದರು. ಲಗ್ಗೇಜ್ಗಳಲ್ಲಿ ಬಾಂಬ್ ಬಗ್ಗೆ ಎಂಬ ಮಾಹಿತಿ ಇದೆ. ಹಾಗಾಗಿ ವಿಶೇಷ ತಪಾಸಣೆ ಮಾಡಬೇಕಿದೆ ಎಂದು ಹೇಳಿದ ಅಧಿಕಾರಿಗಳು ನಮ್ಮನ್ನು ನಿಲ್ದಾಣದಲ್ಲೇ ಸುಮಾರು ಮೂರ್ನಾಲ್ಕು ಗಂಟೆ ಕಾಯಿಸಿ ದ್ದಾರೆ. ಲಗ್ಗೇಜ್ಗಳನ್ನು ಎತ್ತಿ ಕಸದಂತೆ ಎಸೆದಿದ್ದಾರೆ ಎಂದು ಆರೋಪಿಸಿದರಲ್ಲದೆ, ಒಂದು ವೇಳೆ ಆ ಅಧಿಕಾರಿ, ಸಿಬ್ಬಂದಿಯ ಮನೆಯವರ ಲಗ್ಗೇಜ್ ಆಗಿದ್ದರೆ ಅವರು ಹೀಗೆ ಎಸೆಯುತ್ತಿದ್ದರೇ? ಪ್ರಶ್ನಿಸಿದ್ದಾರೆ.
ನಾವು ವಿದೇಶದಲ್ಲಿ ಕಷ್ಟಪಟ್ಟು ದುಡಿದು ತಂದ ಸೊತ್ತು ಅದಾಗಿತ್ತು. ಇಲೆಕ್ಟ್ರಾನಿಕ್ಸ್ ಸಾಮಗ್ರಿಯೂ ಲಗ್ಗೇಜ್ನಲ್ಲಿತ್ತು. ಮಳೆ ನೀರಿಗೆ ಒದ್ದೆಯಾಗಿದೆ. ಅದನ್ನು ಬಳಕೆ ಮಾಡಲು ಸಾಧ್ಯವಾಗುವುದೋ ಎಂದು ಗೊತ್ತಿಲ್ಲ. ನಮ್ಮಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ವೃದ್ಧರು ಇದ್ದರು. ಅಷ್ಟು ಹೊತ್ತು ಕಾಯಿಸಿದರೂ ಒಂದು ತೊಟ್ಟು ನೀರನ್ನು ನಮಗೆ ಕೊಡಲಿಲ್ಲ. ಹಸಿವು ತಾಳಲಾರದೆ ನಾವು ಆಕ್ರೋಶ ವ್ಯಕ್ತಪಡಿಸಿದ ಬಳಿಕ ನೀರು ಕೊಟ್ಟರು. ನಾವೇನೋ ಭಾರತೀಯರು. ಸಹಿಸಿಕೊಳ್ಳುವವರು ಎಂದಿಟ್ಟುಕೊಳ್ಳೋಣ. ಆದರೆ ನಮ್ಮೊಂದಿಗೆ ಕೆಲವು ಮಂದಿ ವಿದೇಶಿ ಪ್ರಯಾಣಿಕರೂ ಇದ್ದರು. ಭಾರತದ ಬಗ್ಗೆ ಅವರ ಊರಿಗೆ ಹೋಗಿ ಏನು ಹೇಳ್ತಾರೋ ಏನೋ ಎಂದು ಚರಣ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಬಾಂಬ್ ಬಿಡಿ, ಏನೂ ಇಲ್ಲ, ಸುಮ್ಮನೆ ನಮ್ಮನ್ನು ತಪಾಸಣೆ ಮಾಡಿಸಿದ್ದಾರೆ. ಲಗ್ಗೇಜ್ ಸಾಮಗ್ರಿಯನ್ನು ಮೀನು ಬಿಡಿಸಿಟ್ಟಂತೆ ಬಿಡಿಸಿಟ್ಟಿದ್ದರು. ಅದನ್ನು ಕಂಡು ಸಹಿಸಲು ಸಾಧ್ಯವಾಗಲಿಲ್ಲ. ಸ್ಪಷ್ಟ ಮಾಹಿತಿಯೂ ಕೊಟ್ಟಿರಲಿಲ್ಲ. ನಾವು ಸ್ವಲ್ಪ ಆಕ್ರೋಶದಿಂದ ಮಾತನಾಡಿದೆವು. ತಡವಾಗುವುದಾದರೆ ಬಸ್ಸಿನಲ್ಲಾದರೂ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದೆವು. ಕೊನೆಗೂ ನಮ್ಮನ್ನು ವಿಮಾನ ಹತ್ತಿಸಿದರು. ಸಂಜೆ ಮಂಗಳೂರಿಗೆ ಬಂದು ತಲುಪಬೇಕಿದ್ದ ನಾವು ಈಗ (ರವಿವಾರ ರಾತ್ರಿ ಸುಮಾರು ೧೧ ಗಂಟೆ) ಬಂದು ಮುಟ್ಟಿದೆವು ಎಂದು ಸಫ್ವಾನ್ ಉಳ್ಳಾಲ್, ರಕ್ಷಾ ಮತ್ತಿತರ ಪ್ರಯಾಣಿಕರು ತಿಳಿಸಿದರು.