ಎಲ್ಲಿದ್ದಾರೆ ಗೋಡ್ಸೆ ವಿರೋಧಿಗಳು?
ಮಾನ್ಯರೇ,
ಭಾರತದಲ್ಲಿ ಸದ್ಯ ನಡೆಯುತ್ತಿರುವುದೇನು? ಇದು ಗಾಂಧಿವಾದ ಮತ್ತು ಗೋಡ್ಸೆವಾದಗಳ ಪರಸ್ಪರ ಸಂಘರ್ಷ ಎಂದು ಕೆಲವರು ಹೇಳಿದರೆ ಇದು ಮನುವಾದಿಗಳು ಮತ್ತು ಜಾತ್ಯತೀತವಾದಿಗಳ ನಡುವಣ ಘರ್ಷಣೆ ಎಂದು ಮತ್ತೆ ಕೆಲವರು ಹೇಳುತ್ತಾರೆ. ಇನ್ನು ಕೆಲವರು ಇದನ್ನು ಹಿಂಸಾವಾದಿಗಳು ಮತ್ತು ಶಾಂತಿಯ ಪ್ರತಿಪಾದಕರ ಮಧ್ಯೆ ಏರ್ಪಟ್ಟಿರುವ ಜಗಳ ಎಂದು ಕರೆಯುತ್ತಿದ್ದಾರೆ. ಆದರೆ ಸಮಸ್ಯೆ ಏನೆಂದರೆ ಗೋಡ್ಸೆವಾದಿಗಳು, ಮನುವಾದಿಗಳು ಮತ್ತು ಹಿಂಸಾವಾದಿಗಳು ಎಲ್ಲೆಂದರಲ್ಲಿ ಹಗಲಿರುಳೂ ಚಟುವಟಿಕೆಯಲ್ಲಿರುವುದು ಎದ್ದು ಕಾಣುತ್ತದೆ. ಪ್ರತಿ ನಿಮಿಷವೂ ಅವರ ಬೆಂಕಿಹಚ್ಚುವ ಹೇಳಿಕೆ, ಭಾಷಣಗಳೆಲ್ಲಾ ಪತ್ರಿಕೆಗಳಲ್ಲೂ, ಟಿವಿ ಚಾನೆಲ್ಗಳಲ್ಲೂ ಸಾಮಾಜಿಕ ಮಾಧ್ಯಮಗಳಲ್ಲೂ ರಾರಾಜಿಸುತ್ತಿರುತ್ತವೆ. ಆದರೆ ಈ ದುಷ್ಟರನ್ನು ವಿರೋಧಿಸಬೇಕಾಗಿದ್ದ, ಅವರ ನಿಜಬಣ್ಣವನ್ನು ಬಯಲಿಗೆಳೆಯಬೇಕಾಗಿದ್ದ, ಅವರೆಲ್ಲ ಯಾವುದೇ ಸಮಾಜದ ನೈಜ ಪ್ರತಿನಿಧಿಗಳಲ್ಲ ಎಂದು ಸಮಾಜಕ್ಕೆ ಮನವರಿಕೆ ಮಾಡಿಸಬೇಕಾಗಿದ್ದ ಗಾಂಧಿವಾದಿ, ಜಾತ್ಯತೀತವಾದಿ, ಶಾಂತಿಪರ ಪಕ್ಷಗಳ ನಾಯಕರಾಗಲಿ ಕಾರ್ಯಕರ್ತರಾಗಲಿ ಎಲ್ಲೂ ಕಾಣಿಸುತ್ತಿಲ್ಲ. ಅವರು ಎಲ್ಲೂ ಈ ದುಷ್ಟರನ್ನು ವಿರೋಧಿಸುತ್ತಿಲ್ಲ. ದುಷ್ಟರ ದುಷ್ಟಹೇಳಿಕೆಗಳನ್ನು ಖಂಡಿಸುತ್ತಿಲ್ಲ. ತಮ್ಮ ಜಾತಿಯ ವೇದಿಕೆಗಳಲ್ಲಿ ಇದರ ವಿರುದ್ಧ ಮಾತನಾಡುತ್ತಿಲ್ಲ. ಇದರ ಅರ್ಥವೇನು?
ಕೋಮುವಾದಿ ಆಕ್ರಮಣಗಳನ್ನು ಮತ್ತು ಗೋಡ್ಸೆವಾದಿಗಳ ಬಹಿರಂಗ ಅಪರಾಧಗಳನ್ನು ಅಲ್ಪಸಂಖ್ಯಾತ ಸಮಾಜವು ಒಂಟಿಯಾಗಿ ಎದುರಿಸಬೇಕೇ? ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಪೊಲೀಸರನ್ನು ಒತ್ತಾಯಿಸುವ ಕೆಲಸವನ್ನೂ ಅವರೇ ಮಾಡಬೇಕೇ? ಗಾಂಧಿವಾದಿಗಳು ಗೋಡ್ಸೆವಾದಿಗಳ ತಂಡದ ಮೌನ ಸದಸ್ಯರಾಗಿ ಬಿಟ್ಟಿದ್ದಾರೆಯೇ? ತಾವು ಸೌಹಾರ್ದಪ್ರಿಯರೆಂದು ಹೇಳಿಕೊಳ್ಳುವ ಸೆಕ್ಯುಲರ್ ಪಕ್ಷಗಳ ನಾಯಕರು ಕೋಮುವಾದಿ ಪಕ್ಷಗಳ ಜೊತೆ ರಾಜಿ ಮಾಡಿಕೊಂಡಿದ್ದಾರೆಯೇ? ಅಲ್ಪಸಂಖ್ಯಾತರಿಗೆ ನೀವೆಷ್ಟು ದೊಡ್ಡ ಅನ್ಯಾಯ ಮಾಡಿದರೂ ನಾವು ಸೊಲ್ಲೆತ್ತುವುದಿಲ್ಲ ಎಂದು ಅವರೇನು ಸಂಘನಿಕೇತನದಲ್ಲಿ ಪ್ರತಿಜ್ಞೆ ಮಾಡಿದ್ದಾರೆಯೇ? ಇದೆಲ್ಲ ಸತ್ಯವಲ್ಲ ಎಂಬುದನ್ನು ಸಾಬೀತು ಪಡಿಸಬೇಕಿದ್ದರೆ ಸೆಕ್ಯುಲರ್ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಈ ವಿಷಯದಲ್ಲಿ ಸ್ಪಷ್ಟವಾಗಿ ಮಾತನಾಡಬೇಕು. ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಕೋಮುವಾದಿಗಳ ಒಂದೊಂದು ಅಪರಾಧವನ್ನು ಪ್ರಸ್ತಾಪಿಸಿ ಅವುಗಳನ್ನು ಕಠೋರವಾಗಿ ಖಂಡಿಸಬೇಕು. ಕೋಮುವಾದಿ ಅಪರಾಧಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು. ಆರಾಧನಾ ಸ್ಥಳಗಳನ್ನು ದ್ವೇಷ ಪ್ರಸಾರದ ವೇದಿಕೆಯಾಗಿ ಬಳಸುವುದನ್ನು ಅತ್ಯುಗ್ರವಾಗಿ ಖಂಡಿಸಬೇಕು. ಕೋಮುವಾದಿಗಳ ದ್ವೇಷದ ಆಂದೋಲನವನ್ನು ಸೋಲಿಸಲು ಸಕ್ರಿಯವಾಗಿ ಹೋರಾಟ ನಿರತರಾಗಬೇಕು. ಅಂತಹ ದೃಶ್ಯ ಯಾವಾಗ ಕಾಣಲು ಸಿಕ್ಕೀತು?







