ಎ.1ರಿಂದ ಶಕ್ತಿ ವಸತಿ ಶಾಲೆಯಲ್ಲಿ 'ಶಕ್ತಿ ಕ್ಯಾನ್ ಕ್ರಿಯೇಟ್ ಶಿಬಿರ'

ಮಂಗಳೂರು, ಮಾ. 23: ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆಶ್ರಯದಲ್ಲಿ ಎ.1ರಿಂದ 'ಶಕ್ತಿ ಕ್ಯಾನ್ ಕ್ರಿಯೇಟ್-2022' ಶೀರ್ಷಿಕೆಯಲ್ಲಿ ಈಜು, ಬೇಸಿಗೆ ಹಾಗೂ ಕ್ರಿಕೆಟ್ ಶಿಬಿರವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಶಿಬಿರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಶಕ್ತಿ ಎಜುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ರಮೇಶ್ಕೆ., ಶಿಬಿರದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದರು.
ಶಕ್ತಿ ವಸತಿ ಶಾಲೆಯ ಈಜುಕೊಳದಲ್ಲಿ ಎ.1ರಿಂದ 21ರವರೆಗೆ ಈಜು ಶಿಬಿರ ನಡೆಯಲಿದೆ. ಬೆಳಗ್ಗೆ ಮತ್ತು ಸಂಜೆ ಮೂರು ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಶಿಬಿರದ ಶುಲ್ಕ 2,800 ರೂ. ನಿಗದಿಪಡಿಸಲಾಗಿದೆ. ಶಿಬಿರವನ್ನು ಮಂಗಳಾ ಈಜು ತರಬೇತುದಾರರು ನಡೆಸಲಿದ್ದಾರೆ. ಶಿಬಿರದ ಸಂಯೋಜಕರಾಗಿ ಶಕ್ತಿ ಶಾಲೆಯ ಈಜು ತರಬೇತುದಾರ ರಾಜೇಶ್ ಖಾರ್ವಿ ಸಹಕರಿಸಲಿದ್ದಾರೆ. ಬೇಸಿಗೆ ಶಿಬಿರವು ಎ.1ರಿಂದ 23ರವರೆಗೆ ನಡೆಯಲಿದ್ದು, ಎಲ್ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಿಬಿರದ ಶುಲ್ಕ 3,000 ರೂ. ಗಳಾಗಿರುತ್ತದೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಊಟ, ತಿಂಡಿ ಮತ್ತು ವಾಹನದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು ಎಂದವರು ತಿಳಿಸಿದರು.
ಶಿಬಿರದಲ್ಲಿ ವಿವಿಧ ಕಲೆ, ನಾಯಕತ್ವ ತರಬೇತಿಗಳ ಕುರಿತಂತೆ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾಗಿ ದಯಾ, ಜಾನ್ ಚಂದ್ರನ್, ವೀಣಾ ಶ್ರೀನಿವಾಸ್, ಸುಧೀರ್ ಕಾವೂರು, ರತ್ನಾವತಿ ಜೆ. ಬೈಕಾಡಿ, ಅರುಣ್ ಕುಮಾರ್ ಕುಳಾಯಿ, ಪ್ರೇಮನಾಥ ಮರ್ಣೆ, ರಚನಾ ಕಾಮತ್, ಮುರಳೀಧರ ಕಾಮತ್, ನಾದಶ್ರೀ, ಸಪ್ನಾ, ರಚನಾ ಸೂರಜ್, ಸಿಪಾಲಿ ಕರ್ಕೇರ, ಪ್ರಥ್ವಿರಾಜ್, ವಿದ್ಯಾ ಕಾಮತ್, ರಾಜೇಶ್ವರಿ, ಪ್ರಶಾಂತ್, ಅಶ್ಲೆ, ಸುಂದರ್ ತೋಡಾರ್, ಸಹನಾ ತೋಡಾರ್ ಮೊದಲಾದವರು ತರಬೇತಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ಕ್ರಿಕೆಟ್ ಶಿಬಿರವು ಎ.1ರಿಂದ 30ರವರೆಗೆ ಸಂಜೆ 4ರಿಂದ 6 ಗಂಟೆಯವರೆಗೆ ನಡೆಯಲಿದೆ. ತರಬೇತುದಾರ ಸಾಮ್ಯುಯಲ್ ಜಯರಾಜ್ ಮತ್ತು ರಾಜೇಶ್ ಶೆಟ್ಟಿ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದ್ದು, ಶಿಬಿರದ ಶುಲ್ಕ 2,500 ರೂ. ಆಗಿರುತ್ತದೆ. ಶಿಬಿರಕ್ಕೆ ಆನ್ಲೈನ್ ವೆಬ್ಸೈಟ್ www.shakthi.edu.in ಮೂಲಕ ನೋಂದಣಿ ಮಾಡಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ಪೃಥ್ವಿರಾಜ್ ಉಪಸ್ಥಿತರಿದ್ದರು.