ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಪ್ರವೃತ್ತಿಗೆ ಕಡಿವಾಣ ಹಾಕಲು ಪಿಎಫ್ಐ ಆಗ್ರಹ
ಮಂಗಳೂರು : ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಬೆಳವಣಿಗೆಗಳು ಅವಿಭಜಿತ ದ.ಕ.ಜಿಲ್ಲೆಯ ಕೆಲವು ಕಡೆಗಳಲ್ಲಿ ಕಂಡು ಬರುತ್ತಿದ್ದು, ನಾಗರಿಕರ ಜೀವನೋಪಾಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುವ ಇಂತಹ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಆಗ್ರಹಿಸಿದ್ದಾರೆ.
ಬಿಜೆಪಿ-ಸಂಘಪರಿವಾರದ ನಾಯಕರ ಒತ್ತಡದಿಂದ ಇತ್ತೀಚಿಗೆ ಕಾಪು ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುವ ಹೊಸದಾದ ಪ್ರವೃತ್ತಿಗೆ ನಾಂದಿ ಹಾಡಲಾಯಿತು. ಬಳಿಕ ಅದು ದ.ಕ.ಜಿಲ್ಲೆಗೂ ವ್ಯಾಪಿಸಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಮರು ತಲೆತಲಾಂತರಗಳಿಂದ ಅನ್ಯೋನ್ಯತೆಯಿಂದ ಜೀವಿಸುತ್ತಾ ಬಂದಿದ್ದಾರೆ. ಪರಸ್ಪರರ ಜಾತ್ರೆ, ಸಮಾರಂಭಗಳಲ್ಲಿ ವ್ಯಾಪಾರ ವಹಿವಾಟುಗಳನ್ನೂ ನಡೆಸುತ್ತಿದ್ದಾರೆ. ಹಿಂದು-ಮುಸ್ಲಿಮರಲ್ಲಿನ ತಳ ವರ್ಗದ ಹಲವಾರು ಕುಟುಂಬಗಳು ಇದೇ ಕಸುಬನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿವೆ. ಸಂಘಪರಿವಾರವು ಇದೀಗ ಮುಸ್ಲಿಮ್ ವ್ಯಾಪಾರಿಗಳ ಮೇಲೆ ಅಸಹಿಷ್ಣುತೆ ತೋರುತ್ತಾ ತನ್ನ ಕೋಮು ಅಜೆಂಡಾವನ್ನು ಆಳವಾಗಿ ಬಿತ್ತಲು ಪ್ರಯತ್ನಿಸುತ್ತಿದೆ. ಕೇವಲ ಜಾತ್ರೆ, ಸಮಾರಂಭಗಳಲ್ಲದೆ ಇತರ ವ್ಯಾಪಾರ ವಹಿವಾಟುಗಳಲ್ಲೂ ಉಭಯ ಸಮುದಾಯದ ಜನರು ಪರಸ್ಪರರನ್ನು ನೆಚ್ಚಿಕೊಂಡಿದ್ದಾರೆ. ಹೀಗಿರುವಾಗ ಸಂಘಪರಿವಾರದ ಶಕ್ತಿಗಳು ಕೋಮುಧ್ರುವೀಕರಣದ ಭಾಗವಾಗಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವ ಮೂಲಕ ಪರಸ್ಪರರನ್ನು ವಿಭಜಿಸುವ ಪಿತೂರಿಯಲ್ಲಿ ತೊಡಗಿದೆ. ಹಾಗಾಗಿ ದ.ಕ.ಜಿಲ್ಲಾಡಳಿತವು ಮಧ್ಯ ಪ್ರವೇಶಿಸಿ ವ್ಯಾಪಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು. ವ್ಯಾಪಾರಿಗಳ ಸಾಂವಿಧಾನಿಕ ಹಕ್ಕನ್ನು ಕಸಿಯುವ ಷಡ್ಯಂತ್ರಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಹಕ್ಕಿನ ಉಲ್ಲಂಘನೆಗೆ ಪ್ರಚೋದನೆ ನೀಡುವ ಮತ್ತು ವ್ಯಾಪಾರಿಗಳಿಗೆ ಬೆದರಿಕೆ ನೀಡುವ ಸಂಘಪರಿವಾರದ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಇಜಾಝ್ ಅಹ್ಮದ್ ಒತ್ತಾಯಿಸಿದ್ದಾರೆ.





