ಆಟಿಸಂ ರೋಗವಲ್ಲ, ಅದೊಂದು ಸ್ವಭಾವ: ಸಿಇಓ ಡಾ.ನವೀನ್ ಭಟ್

ಮಣಿಪಾಲ : ಆಟಿಸಂ ಎಂಬುದೊಂದು ಖಾಯಿಲೆಯಲ್ಲ, ಇದೊಂದು ಸ್ವಭಾವ. ಇಂತಹ ಹಠ ಸ್ವಭಾವದ ಮಕ್ಕಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಪ್ರಸ್ತುತ ಸಮಾಜದಲ್ಲಿ ಬಹಳ ಅನಿವಾರ್ಯ ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ನವೀನ್ ಭಟ್ ವೈ. ಹೇಳಿದ್ದಾರೆ.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಆಟಿಸಂ ಸೊಸೈಟಿ ಆಫ್ ಉಡುಪಿ ಇವರ ಸಂಯುಕ್ತ ಆಶ್ರಯದೊಂದಿಗೆ ಅಂಗನವಾಡಿ ಮೇಲ್ವಿಚಾರಕರು ಮತ್ತು ಆಶಾ ಕಾರ್ಯಕರ್ತ ಮೇಲ್ವಿಚಾರಕರಿಗೆ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ನಲ್ಲಿ ನಡೆದ ಸ್ವಲೀನತೆ ಜಾಗೃತಿ ಕಾರ್ಯಗಾರ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ೫೮ ಮಕ್ಕಳಿಗೆ ಆಟಿಸಂ ಇರುವ ಪಟ್ಟಿ ಸಿಕ್ಕಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಸರ್ವೆ ಮಾಡುವ ಮೂಲಕ ಮುಂದೆ ಆ ಮಕ್ಕಳಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬಹುದು ಎಂಬ ಯೋಜನೆ ಕೈಗೊಳ್ಳಬಹುದು. ಆಟಿಸಂ ಎಂಬುದು ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಮುಂದೆ ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಕಷ್ಟವಾಗಬಹುದು. ಆದ್ದರಿಂದ ಸಣ್ಣ ವಯಸ್ಸಿ ನಲ್ಲಿಯೇ ಮಕ್ಕಳಲ್ಲಿ ಬದಲಾವಣೆ ತರಲು ಅಂಗನವಾಡಿ ಮೇಲ್ವಿಚಾರಕರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಈ ಜಾಗೃತಿ ಕಾರ್ಯಗಾರ ಉಪಯುಕ್ತ ವಾದದ್ದು ಎಂದರು.
ಆಟಿಸಂ ಸೊಸೈಟಿ ಆಫ್ ಉಡುಪಿ ಅಧ್ಯಕ್ಷ ಡಾ.ಪಿ.ವಿ. ಭಂಡಾರಿ ಮಾತನಾಡಿ ಆಟಿಸಂ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ಸಿಗಬೇಕು ಜೊತೆಗೆ ಆಟಿಸಂ ಕಂಡೀಷನ್ ಇರುವ ಮಕ್ಕಳು ಮತ್ತು ಮಕ್ಕಳ ಪೋಷಕರ ಸಮಸ್ಯೆಗಳಿಗೆ ಸ್ಪಂಧಿಸುವಂತಹ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಬೇಕು ಎಂದರು.
ಆಟಿಸಂ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಸರಿಯಾದ ತರಬೇತಿಯನ್ನು ನೀಡಿದ್ದಲ್ಲಿ ಗುಣಪಡಿಸಲು ಸಾಧ್ಯ. ಇದಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಉಡುಪಿ, ಕಾರ್ಕಳ, ಕುಂದಾಪುರಗಳಲ್ಲಿ ಚಿಕಿತ್ಸಾ ಸೆಂಟರ್ಗಳನ್ನು ಸ್ಥಾಪಿಸುವ ಉದ್ದೇಶ ಇದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಅಂಗನವಾಡಿ ಮೇಲ್ವಿಚಾರಕರು ಮತ್ತು ಆಶಾ ಕಾರ್ಯಕರ್ತೆಯರು ಸಮಾಜದ ಮಕ್ಕಳು ಹಾಗೂ ಜನಸಾಮಾನ್ಯರಲ್ಲಿ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಆದ್ದರಿಂದ ಈ ಜಾಗೃತಿ ಕಾರ್ಯಗಾರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ವಿದ್ಯಾರ್ಥಿ ನಿರ್ವಹಣಾ ವಿಭಾಗದ ನಿರ್ದೇಶಕರಾದ ಡಾ. ಗೀತ ಮಯ್ಯ, ಬಿವಿಟಿಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಉಪಸ್ಥಿತರಿದ್ದರು.
ವಿಕಲಚೇತನರ ಸಬಲೀಕರಣ ಅಧಿಕಾರಿ ರತ್ನ ಸ್ವಾಗತಿಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಂದಿಸಿದರು. ಆಟಿಸಂ ಸೊಸೈಟಿ ಆಫ್ ಉಡುಪಿ ಯ ಕಾರ್ಯಕ್ರಮ ವ್ಯವಸ್ಥಾಪಕ ಕೀರ್ತೆಶ್ ಎಸ್ ಕಾರ್ಯಕ್ರಮ ನಿರೂಪಿಸಿದರು.







