ಶೇ.40 ಕಮಿಷನ್ ಆರೋಪ: ಸದನದಲ್ಲಿ ಚರ್ಚೆಗೆ ಅವಕಾಶ ನಿರಾಕರಣೆ, ರಾಜ್ಯ ಸರಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು, ಮಾ.23: ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು 40 ಪರ್ಸೆಂಟ್ ಕಮಿಷನ್ ವ್ಯವಹಾರದ ಕುರಿತಾಗಿ ಚರ್ಚಿಸಲು ವಿಧಾನಸಭೆಯಲ್ಲಿ ನಿಯಮ 60ರ ಅಡಿಯಲ್ಲಿ ನಿಲುವಳಿ ಸೂಚನೆ ನೀಡಿದ್ದೆವು. ಆದರೆ, ಸ್ಪೀಕರ್ ಈ ಬಗ್ಗೆ ನಮ್ಮ ಪ್ರಾಥಮಿಕ ಸಲ್ಲಿಕೆಗೂ ಅವಕಾಶ ನೀಡದೆ ನಮ್ಮ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ವಿಧಾನಸೌಧದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಸಚಿವರು ಮತ್ತು ಕೆಲವು ಇಲಾಖೆಗಳ ಅಧಿಕಾರಿಗಳು ಸರಕಾರಿ ಟೆಂಡರ್ಗಳಲ್ಲಿ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದಿದ್ದರು, ಕಳೆದ ವರ್ಷದ ನವೆಂಬರ್ನಲ್ಲಿ ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಸಾರವಾಗಿತ್ತು ಎಂದರು.
ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲು ಅವಕಾಶ ಕೇಳಿದ್ದೆ, ಆಗ ಚರ್ಚೆಗೆ ಬರಲಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯ ಸಂದರ್ಭದಲ್ಲಿ ನಾವು ಧರಣಿ ಮಾಡಿದ್ದರಿಂದ ಚರ್ಚೆ ಸಾಧ್ಯವಾಗಿಲ್ಲ. ಈಗ ನಿಮಯ 60 ರಡಿ ಚರ್ಚೆಗೆ ಅವಕಾಶ ಕೇಳಿದ್ದೇನೆ. ಇದು ನಿಮಯ 60 ರಡಿ ಚರ್ಚೆ ಕೈಗೆತ್ತಿಕೊಳ್ಳಲು ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ವಿಷಯವಾಗಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಮೊನ್ನೆ ಮಾರ್ಚ್ ತಿಂಗಳಲ್ಲಿ ಪೊಲೀಸ್ ಸ್ಟೇಷನ್ನಲ್ಲಿ ಹೇಗೆ ಭ್ರಷ್ಟಾಚಾರ ನಡೆಯುತ್ತಿದೆ, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಹೊಟೇಲ್ ಮೆನು ಕಾರ್ಡಿನ ರೀತಿ ದರ ನಿಗದಿ ಮಾಡಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆರೋಗ್ಯ ಇಲಾಖೆಯ ಭ್ರಷ್ಟಾಚಾರ ದ ಬಗ್ಗೆ ವರದಿ ಬಂದಿದೆ. ದಿನಾ ಒಂದೊಂದು ಇಲಾಖೆಯ ಭ್ರಷ್ಟಾಚಾರದ ವರದಿ ಬರುತ್ತಿದೆ. ಇವೆಲ್ಲವೂ ಇತ್ತೀಚಿನ ಘಟನೆಗಳು. ಇಷ್ಟೆಲ್ಲಾ ನಡೆಯುತ್ತಿದ್ದರು ವಿರೋಧ ಪಕ್ಷದವರು ಸುಮ್ಮನಿರೋಕಾಗುತ್ತಾ? ಎಂದು ಅವರು ಪ್ರಶ್ನಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಗೆ ಪತ್ರ ಬರೆದು ಸುಮ್ಮನೆ ಕೂರಲಿಲ್ಲ, ಮಾಧ್ಯಮಗಳೆದುರು ಹೋಗಿದ್ದಾರೆ. ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಅವರ ಪತ್ರ ಬಂದಮೇಲೆ ಪ್ರಧಾನಮಂತ್ರಿಗಳು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಮೋದಿ ಅವರು ತಮ್ಮನ್ನು ಚೌಕಿದಾರ್ ಎಂದು ಹೇಳಿಕೊಳ್ತಾರೆ. ನಾ ಖಾವೂಂಗಾ, ನಾ ಖಾನೆದೂಂಗ ಎಂದರೆ ಇದೇನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಗುತ್ತಿಗೆದಾರರು 40 ಪರ್ಸೆಂಟ್ ಸರಕಾರಕ್ಕೆ ಕಮಿಷನ್ ಕೊಟ್ಟು, 15 ಪರ್ಸೆಂಟ್ ಜಿಎಸ್ಟಿ ಕಟ್ಟಿ, 20 ಪರ್ಸೆಂಟ್ ಲಾಭ ಇಟ್ಟಕೊಂಡರೆ ಉಳಿಯೋದು ಎಷ್ಟು? ಜನರ ಬೆವರಿನ ಹಣ ಹೀಗೆ ಪೋಲಾಗುತ್ತಿದೆ, ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡಲ್ಲ ಎಂದರೆ ಹೇಗೆ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆಯಲ್ಲಿ, ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಅವರ ಮನೆಯಲ್ಲೇ ಭ್ರಷ್ಟಾಚಾರ ನಡೆಯುತ್ತೆ ಎಂದು ಹೇಳಿಲ್ಲವೇ? ಎಂದು ಅವರು ಹೇಳಿದರು.
ವಿಶ್ವನಾಥ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಗೆ 20,000 ಕೋಟಿ ಟೆಂಡರ್ ಕರೆದಿದ್ದಾರೆ, ಇದರಲ್ಲಿ 10 ಪರ್ಸೆಂಟ್ ಕಮಿಷನ್ ತೆಗೆದುಕೊಳ್ತಾರೆ ಎಂದು ತಮ್ಮ ಸರಕಾರದ ವಿರುದ್ಧವೇ ಆರೋಪ ಮಾಡಿಲ್ಲವೇ? ವಿರೋಧ ಪಕ್ಷವಾಗಿ ಇದನ್ನು ತಡೆಯುವುದು ನಮ್ಮ ಕರ್ತವ್ಯವಲ್ಲವೇ? ಬಿಜೆಪಿಯವರು ಭ್ರಷ್ಟರು, ಭಂಡರು. ತಮ್ಮ ಹುಳುಕು ಗೊತ್ತಾಗುತ್ತೆ ಎಂದು ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ ಎಂದು ಅವರು ದೂರಿದರು.
ಸರಕಾರದ ಹುಳುಕು ರಾಜ್ಯದ ಜನರಿಗೆ ಗೊತ್ತಾಗಿ, ಭ್ರಷ್ಟಾಚಾರ ಬಯಲಾಗುತ್ತೆ ಎಂದು ಹೆದರಿಕೊಂಡು ಸ್ಪೀಕರ್ ಅವರ ಮೂಲಕ ತಿರಸ್ಕಾರ ಮಾಡಿಸಿದ್ದಾರೆ. ಪಕ್ಷದ ಪರವಾಗಿ ಇದನ್ನು ತೀವ್ರವಾಗಿ ವಿರೋಧ ಮಾಡುತ್ತೇವೆ. ಜನರ ಬಳಿಗೆ ಈ ವಿಷಯವನ್ನು ಕೊಂಡೊಯ್ಯುತ್ತೇವೆ. ಇಲಾಖೆಗಳ ವಿಷಯದ ಮೇಲಿನ ಚರ್ಚೆಯಲ್ಲಿ ಪ್ರಸ್ತಾಪ ಮಾಡಿದರೆ ಮುಖ್ಯಮಂತ್ರಿ, ಸಚಿವರು ಉತ್ತರ ಕೊಡಲೇ ಬೇಕೆಂದಿಲ್ಲ. ನಿಯಮ 60 ರಡಿ ಚರ್ಚೆ ಮಾಡಿದ್ರೆ ಸರಕಾರ ಉತ್ತರ ಕೊಡಲೇಬೇಕಾಗುತ್ತೆ. ಇದರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ಆರೋಗ್ಯ ಸಚಿವ ಸುಧಾಕರ್ ಯಾವ ಕೇಸ್ ಆದರೂ ಹಾಕಲಿ ನಾವದನ್ನು ಎದುರಿಸಲು ತಯಾರಾಗಿದ್ದೇವೆ. ಕೇಸ್ ಹಾಕ್ತೇನೆ ಎಂದು ಹೆದರಿಸಿ ನಮ್ಮನ್ನು ಸುಮ್ಮನಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಒಬ್ಬ ಲಾಯರ್. ಮಾನನಷ್ಟ ಮೊಕದ್ದಮೆ ಎಂದರೆ ಏನಂತ ನನಗೂ ಗೊತ್ತು. ಒಂದು ವೇಳೆ ಕೇಸ್ ಹಾಕಿದರೆ ಇನ್ನೂ ಒಳ್ಳೆಯದು. ನ್ಯಾಯಾಲಯದಲ್ಲೇ ಅವರ ಬಣ್ಣ ಬಯಲು ಮಾಡಬಹುದು ಎಂದು ಸಿದ್ದರಾಮಯ್ಯ ಹೇಳಿದರು.
ಸುಧಾಕರ್ ಕೇಸ್ ಹಾಕಲಿ ಎಂದು ನಾನು ಕಾಯುತ್ತಾ ಇರ್ತೇನೆ. ಕೆಲವರು ತಮ್ಮ ಬಣ್ಣ ಬಯಲಾಗುತ್ತೆ ಎಂದು ಹೆದರಿ ಕೇಸ್ ಹಾಕೋದೆ ಇಲ್ಲ. ಸುಧಾಕರ್ ಕೇಸ್ ದಾಖಲಿಸಿದ್ರೆ ಅದನ್ನು ಸತ್ಯ ಹೊರತರಲು ಸಿಕ್ಕ ಒಳ್ಳೆ ಅವಕಾಶ ಎಂದುಕೊಳ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.







