ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ಸರಕಾರ ಸಿದ್ಧ: ಮುಖ್ಯಮಂತ್ರಿ ಬೊಮ್ಮಾಯಿ
ರಾಜಕೀಯ ಷಡ್ಯಂತ್ರದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಮಾ.23: ಭ್ರಷ್ಟಾಚಾರದ ವಿಚಾರದಲ್ಲಿ ಯಾರ ಯಾರ ಕಾಲದಲ್ಲಿ ಏನೇನು ಆಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಲು ಹಾಗೂ ಅದಕ್ಕೆ ಉತ್ತರ ನೀಡಲು ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಭೋಜನಾ ವಿರಾಮದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆಯಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ರಾಜ್ಯದಲ್ಲಿನ 40 ಪರ್ಸೆಂಟ್ ಕಮಿಷನ್ ವ್ಯವಹಾರದ ಕುರಿತು ಪ್ರಧಾನಿಗೆ ಬರೆದಿರುವ ಪತ್ರದ ಕುರಿತು ಪ್ರಸ್ತಾಪಿಸಲು ಅನುಮತಿ ಕೋರಿದ ವಿಚಾರದ ಮೇಲೆ ಅವರು ಪ್ರತಿಕ್ರಿಯಿಸಿದರು.
ಭ್ರಷ್ಟಾಚಾರದ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಯಾವುದೆ ಆಧಾರವಿಲ್ಲದೆ ಚರ್ಚೆ ಮಾಡೋದು ಹೇಗೆ? ಕೆಂಪಣ್ಣ ಅವರು ಯಾವಾಗ, ಯಾಕೆ, ಯಾರ ಚಿತಾವಣೆಯಿಂದ ಈ ಪತ್ರ ಬರೆದರು ಎಂಬುದರ ಬಗ್ಗೆ ತನಿಖೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಆ ಪತ್ರದಲ್ಲಿ ಉಲ್ಲೇಖಿಸಿರುವ ಆರೋಪಗಳಿಗೆ ಯಾವುದಾದರೂ ಆಧಾರ ಇದೆಯೇ, ಆಧಾರ ರಹಿತವಾದ ಪತ್ರ ಹಿಡಿದುಕೊಂಡು ಇಲ್ಲಿ ಚರ್ಚೆ ಮಾಡಬೇಕು ಎಂದರೆ ಹೇಗೆ? ಅದರಲ್ಲಿ ಯಾವುದಾದರೂ ನಿರ್ದಿಷ್ಟವಾದ ಅಂಶಗಳಿವೆಯೇ? ಈ ಪತ್ರ ಬರೆದು ನಾಲ್ಕು ತಿಂಗಳು ಆಗಿದೆ. ಇದು ನಿಲುವಳಿ ಸೂಚನೆಯಡಿ ಹೇಗೆ ಬರುತ್ತೆ? ನಾವು ಮುಕ್ತವಾದ ಚರ್ಚೆಗೆ ಸಿದ್ಧವಿದ್ದೇವೆ. ಉತ್ತರವನ್ನು ಕೊಡುತ್ತೇವೆ. ಆದರೆ, ಈ ನಿಯಮದಲ್ಲಿ ಚರ್ಚೆಗೆ ಅವಕಾಶವಿಲ್ಲ. ಬೇರೆ ರೀತಿಯಲ್ಲಿ ತಂದು ಸಮಯ ನಿಗದಿ ಮಾಡಿ ಚರ್ಚೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯನವರೇ ನಿಮಗೆ ಸಾಕಷ್ಟು ಅನುಭವವಿದೆ. ಒಮ್ಮೆ ಸ್ಪೀಕರ್ ರೂಲಿಂಗ್ ನೀಡಿದ ನಂತರ ನೀವು ಮತ್ತೆ ಮರುಪರಿಶೀಲನೆ ಮಾಡುವಂತೆ ಕೋರಿದ್ದೀರಾ. ಅವರು ಈ ನಿಯಮಾವಳಿಯಡಿಯಲ್ಲಿ ಬರುವುದಿಲ್ಲ ಎಂದು ಹೇಳಿದ್ದಾರೆ. ಆನಂತರವು ನೀವು ಈ ವಿಷಯ ಪ್ರಸ್ತಾಪಿಸುವುದು ಅಕ್ಷಮ್ಯ ಅಪರಾಧ. ನೀವು ವಿರೋಧ ಪಕ್ಷದ ನಾಯಕರಾಗಿ ಇದು ಶೋಭೆ ತರುವುದಿಲ್ಲ. ಬೇರೆ ನಿಯಮದಡಿ ಚರ್ಚೆಗೆ ತನ್ನಿ ಎಂದರು.
ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ: ಡಾ.ಕೆ.ಸುಧಾಕರ್
ಒಂದು ಪತ್ರಿಕೆಯಲ್ಲಿ ಬಂದ ಕೂಡಲೆ, ಯಾರೋ ಒಬ್ಬ ಮಾಜಿ ಶಾಸಕ ಹೇಳಿದ ಕೂಡಲೆ ಅದು ಖಾತ್ರಿಯಾಗುತ್ತದೆಯೇ? ಸಿಎಜಿ ವರದಿಯಲ್ಲಿ ಎಲ್ಲಾದರೂ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಬಗ್ಗೆ ಅಬ್ಸರ್ವ್ವೇಷನ್ ಮಾಡಿದ್ದಾರಾ. ಮಾಧ್ಯಮದವರು, ಪ್ರತಿ ಸೋಮವಾರ ಒಂದೊಂದು ಇಲಾಖೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ. ಯಾರೋ ಹೇಳಿದರು ಎಂದು ಒಂದು ವರದಿ ಇಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ. ಈ ರಾಜಕೀಯ ಷಡ್ಯಂತ್ರದ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ.
ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ







