ಗುಪ್ತಚರ ಇಲಾಖೆ ಬಲಪಡಿಸದೆ ಹೋದರೆ ರಾಜ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ: ಸ್ಪೀಕರ್ ಕಾಗೇರಿ ಎಚ್ಚರಿಕೆ

ಬೆಂಗಳೂರು, ಮಾ.23: ರಾಜ್ಯದಲ್ಲಿ ಗುಪ್ತಚರ ಇಲಾಖೆ ನಿಶಕ್ತವಾಗಿದ್ದು, ಅದನ್ನು ಬಲಪಡಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದರು.
ಬುಧವಾರ ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಗುಪ್ತಚರ ಇಲಾಖೆ ನಿಷ್ಕ್ರಿಯವಾಗಿದೆ. ಇದನ್ನು ಸಶಕ್ತಗೊಳಿಸಬೇಕು ಎಂದರು.
ಗುಪ್ತಚರ ಇಲಾಖೆಯಲ್ಲಿ ಹೊಸಬರು ಇಲ್ಲ. ಇದ್ದವರು ಸೇವಾ ಅವಧಿ ಮುಗಿಯುವ ಹಂತದಲ್ಲಿದ್ದಾರೆ. ಬೇಡದ ಪೊಲೀಸರನ್ನು ಅಲ್ಲಿಗೆ ಹಾಕಲಾಗುತ್ತೆ. ಟಿವಿಗಳ ಹೆಡ್ಲೈನ್ಸ್ ಅನ್ನು ಗುಪ್ತಚರ ಇಲಾಖೆಯವರು ಬ್ರೀಫಿಂಗ್ ಕೊಟ್ಟು ಬಿಡುವ ಸ್ಥಿತಿಯಲ್ಲಿ ಇದ್ದಾರೆ. ಮಿಲಿಟರಿ ಇಂಟೆಲಿಜೆನ್ಸ್ ಮಾದರಿಯ ಇಂಟೆಲಿಜೆನ್ಸ್ ನಮ್ಮಲ್ಲಿ ಬೇಕು ಎಂದು ಸ್ಪೀಕರ್ ಹೇಳಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್ ಮಾತನಾಡಿ, ಹಿಜಾಬ್ ವಿಚಾರದ ಬೆಳವಣಿಗೆಯಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಮಕ್ಕಳ ಮೈಂಡ್ ವಾಶ್ ಮಾಡುವ ಇಂತಹ ಘಟನೆಗಳ ಬಗ್ಗೆ ಎಚ್ಚೆತ್ತ್ತುಕೊಂಡಿದ್ದರೆ, ಇಂತಹ ಅನಾಹುತಗಳು ಆಗುತ್ತಿತ್ತಾ? ಎಂದು ಪ್ರಶ್ನಿಸಿದರು.
ಗುಪ್ತಚರ ಇಲಾಖೆಯವರು ಮುಖ್ಯಮಂತ್ರಿಗಳಿಗೆ ಸಲಹೆ ಕೊಟ್ಟು ಸಿಎಂಗಳು ಸೋತು ಮನೆಗೆ ವಾಪಸ್ ಬಂದಿದ್ದಾರೆ. ಇಂಟೆಲಿಜೆನ್ಸ್ನವರು ಸರಿ ಇದ್ದಿದ್ದರೆ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಲ್ಲುತ್ತಿದ್ದರಾ? ಇದೇ ಇಂಟಲಿಜೆನ್ಸ್ನ ಪರಿಸ್ಥಿತಿ ಎಂದು ಅವರು ವ್ಯಂಗವಾಡಿದರು.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಗುಪ್ತಚರ ಇಲಾಖೆಗೆ ಪ್ರತ್ಯೇಕ ಕೇಡರ್ ನೇಮಕ ಮಾಡಬೇಕು ಎಂಬ ಚಿಂತನೆ ಇದೆ. ಅವರಿಗೆ ವಿಶೇಷ ತರಬೇತಿ ನೀಡಬೇಕು ಎಂಬ ಚಿಂತನೆ ನಡೆಯುತ್ತಿದೆ ಎಂದರು.







