ಎರಡನೇ ಅವಧಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆದಿತ್ಯನಾಥ್

Photo: Twitter/@ANI
ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಇಂದು ಆದಿತ್ಯನಾಥ್ ಕಿಕ್ಕಿರಿದು ತುಂಬಿದ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸತತ ಎರಡನೇ ಬಾರಿಗೆ ರಾಜ್ಯದಲ್ಲಿ ಒಬ್ಬರು ಮುಖ್ಯಮಂತ್ರಿಯಾಗುತ್ತಿರುವುದು ರಾಜ್ಯದ ಕಳೆದ 37 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉನ್ನತ ಬಿಜೆಪಿ ನಾಯಕರು ಹಾಗೂ ಹಲವಾರು ಬಾಲಿವುಡ್ ನಟರು ಕೂಡ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದರು.
ಕಳೆದ ಬಾರಿಯಂತೆಯೇ ಈ ಬಾರಿ ಕೂಡ ಆದಿತ್ಯನಾಥ್ ಸರಕಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಿರಲಿದ್ದಾರೆ. ಚುನಾವಣೆ ಸೋತರೂ ಕೇಶವ್ ಪ್ರಸಾದ್ ಮೌರ್ಯ ಉಪಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದಿನ ಇನ್ನೊಬ್ಬ ಡಿಸಿಎಂ ದಿನೇಶ್ ಅವರ ಸ್ಥಾನದಲ್ಲಿ ಈ ಬಾರಿ ಬ್ರಾಹ್ಮಣ ಸಮುದಾಯದ ಬೃಜೇಶ್ ಪಾಠಕ್ ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ಒಟ್ಟು 27 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 255ರಲ್ಲಿ ಜಯಭೇರಿ ಬಾರಿಸಿತ್ತು.
ಚಿತ್ರನಟರಾದ ಅಕ್ಷಯ್ ಕುಮಾರ್, ಕಂಗನಾ ರಣಾವತ್, ಬೋನಿ ಕಪೂರ್ ಕೂಡ ಉಪಸ್ಥಿತರಿದ್ದರು.
'ನಯೇ ಭಾರತ್ ಕಾ ನಯಾ ಯುಪಿ' ಎಂದು ಬರೆಯಲಾಗಿದ್ದ ಪೋಸ್ಟರ್ಗಳು ಸ್ಟೇಡಿಯಂ ತುಂಬೆಲ್ಲಾ ರಾರಾಜಿಸುತ್ತಿತ್ತು.





