‘ನಮ್ಮ ಆರೆಸ್ಸೆಸ್’ ಎಂದ ಸ್ಪೀಕರ್ ಹೇಳಿಕೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ...

ಹುಬ್ಬಳ್ಳಿ, ಮಾ.25: 'ನಿನ್ನೆ ಸದನದಲ್ಲಿ ಸಭಾಧ್ಯಕ್ಷರು ಪೀಠದ ಗೌರವ ಮರೆತು, ಆರೆಸ್ಸೆಸ್ ಬಗ್ಗೆ ಮಾತನಾಡಿದ್ದಾರೆ. ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ರೋಷ ಎನ್ನುವುದು ಇದ್ದಿದ್ದರೆ ಸದನದಲ್ಲೇ ಪ್ರತಿಭಟನೆ ಮಾಡಬೇಕಿತ್ತು' ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುವ ಬದಲು ಹಾಳು ಮಾಡುವ ರೀತಿಯಲ್ಲಿ ಎಲ್ಲರೂ ವರ್ತಿಸುತ್ತಿದ್ದಾರೆ. ಭಾವೈಕ್ಯತೆಯನ್ನು ಕೆಡಿಸುವ ಕೆಲಸ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ಕಿಡಿ: ಸಾಧು ಸಂತರು ಧರಿಸುವ ಕೇಸರಿ ಶಿರವಸ್ತ್ರದ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತೀವ್ರ ಚಾಟಿ ಬೀಸಿರುವ ಅವರು, ಎಷ್ಟೇ ಆಗಲಿ, ಅವರು ಕನ್ನಡ ಪಂಡಿತರಲ್ಲವೇ? ಎಂದು ಕಿಡಿಗಾರಿದರು.
ನನಗಿಂತ ಕನ್ನಡವನ್ನು ಚೆನ್ನಾಗಿ ಮಾತನಾಡಬಲ್ಲ ಇನ್ನೊಬ್ಬ ನಾಯಕನಿಲ್ಲ ಎಂದು ನಿನ್ನೆಯೆ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಸಂಧಿ, ಸಮಾಸ ಮತ್ತು ವ್ಯಾಕರಣದಲ್ಲಿ ಅವರು ಪಂಡಿತರಂತೆ. ಆ ಸಂಸ್ಕಾರದ ಮೂಸೆಯಿಂದ ಇಂಥ ಅಣಿಮುತ್ತುಗಳು ಉದುರುತ್ತವೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಸಿದ್ದರಾಮಯ್ಯ ಅವರ ಮಾತುಗಳಿಗೆ ನಾನು ಮಹತ್ವ ನೀಡಲ್ಲ. ಈ ಸೂಕ್ಷ್ಮ ವಿಷಯದ ಬಗ್ಗೆ ನಾನು ಏನು ಹೇಳಬೇಕೋ ಅದನ್ನು ಸದನದಲ್ಲೇ ಹೇಳಿದ್ದೇನೆ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸಿದ್ದರಾಮಯ್ಯ ನಿನ್ನೆ ಸದನದಲ್ಲಿ ನಿಲುವಳಿ ಸೂಚನೆ ಮೇಲೆ ಮಾತನಾಡಿದರು. ವರ್ತಮಾನದ ವಿಷಯಗಳನ್ನು ಬಿಟ್ಟು ಹಳೆಯ ವಿಷಯಗಳನ್ನು ಕೆದಕಿದರು. ಅವರ ಭಾಷಣದ ಕೊನೆ ಕ್ಷಣದಲ್ಲಿ ಯಾರೋ ಬಂದು ಕಿವಿಯಲ್ಲಿ ಹೇಳಿದರು ಅಂತ ‘ಹಿಜಾಬ್’ ಬಗ್ಗೆ ಮಾತನಾಡಿದರು ಎಂದು ಕುಮಾರಸ್ವಾಮಿ ಟೀಕಿಸಿದರು.
ಮಹಾದಾಯಿ ಪಾದಯಾತ್ರೆ ಬಗ್ಗೆ ಕಿಡಿ: ಈ ಹಿಂದೆ ಮಹಾದಾಯಿ ನೀರಿಗಾಗಿ ಯಮನೂರು ರೈತರು ಪಾದಯಾತ್ರೆ ಮಾಡಿದಾಗ ಇದೇ ಸಿದ್ದರಾಮಯ್ಯ ಸರಕಾರ ಅಧಿಕಾರದಲ್ಲಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಮಹಿಳೆಯರು, ಕೂಲಿ ಕಾರ್ಮಿಕರ ಮೇಲೆ ಪೊಲೀಸರಿಂದ ದಬ್ಬಾಳಿಕೆ ನಡೆಸಿ ಅವರೆಲ್ಲರನ್ನೂ ಬಳ್ಳಾರಿ, ಚಿತ್ರದುರ್ಗ ಜೈಲುಗಳಿಗೆ ಅಟ್ಟಲಾಯಿತು. ಈಗ ಇವರು ಮಹಾದಾಯಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸ್ವಲ್ಪವಾದರೂ ಆತ್ಮಸಾಕ್ಷಿ ಇದೆಯಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೊರಟರು. ಅದು ಕೃಷ್ಣೆಯ ನಡಿಗೆ ಆಂಧ್ರದ ಕಡೆಗೆ ಎನ್ನುವಂತೆ ಆಯಿತು. ಐದು ವರ್ಷ ಸರಕಾರ ಇದ್ದರೂ ಏನು ಮಾಡಲಿಲ್ಲ. ಈಗ ಮತ್ತೆ ಪಾದಯಾತ್ರೆ ಬಗ್ಗೆ ಮಾತನಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಛೇಡಿಸಿದರು.







