ಬಿಸಿಲ ತಾಪ... ಪಕ್ಷಿಗಳ ಪರಿತಾಪ...!

ರಾಜ್ಯದೆಲ್ಲೆಡೆ ಬಿಸಿಲ ಬೇಗೆ ಏರುತ್ತಿದೆ. ಬಯಲು ಸೀಮೆಯಲ್ಲಂತೂ ತೀವ್ರವಾಗಿದೆ. ಒಣ ತುಟಿಗಳ ಮೇಲೆ ನಾಲಗೆಯಾಡಿಸುತ್ತಲೇ ತಣ್ಣೀರಿಗಾಗಿ ಪರಿತಪಿಸುತ್ತದೆ ಮನಸ್ಸು. ಮನುಷ್ಯರಾದರೆ ಕಂಡಲ್ಲಿ ತಣ್ಣೀರ ಬಾಟಲಿಯನ್ನು ಕೊಂಡು ಕುಡಿದು, ಬಾಟಲಿ ಎಸೆದರೆ ಮುಗಿಯಿತು. ಆದರೆ ನೀಲಾಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳು? ಅವುಗಳಿಗೆ ಇದ್ದಕ್ಕಿದ್ದಂತೆ ಕಣ್ಣುಗಳು ಮಂಜಾಗುತ್ತವೆ, ರೆಕ್ಕೆಗಳು ಸೋಲುತ್ತವೆ, ಶಕ್ತಿಹೀನವಾಗಿ ನೆಲಕ್ಕೆ ಬಿದ್ದು ಹೊರಳಾಡುತ್ತವೆ. ಇದನ್ನು ಯಾರಾದರೂ ಗಮನಿಸಿ ಗುಟುಕು ನೀರು ಕುಡಿಸಿದರೆ ಮತ್ತೆ ಬಲ ಬಂದು ಮುಗಿಲ ಕಡೆ ಹಾರುತ್ತವೆ. ಇಲ್ಲದಿದ್ದರೆ ಅವುಗಳ ಪ್ರಾಣಕ್ಕೇ ಸಂಕಟ...
ಒಂದರೆಕ್ಷಣ ಈ ಹಕ್ಕಿಗಳ ಬಗ್ಗೆ ಯೋಚಿಸಿ... ಈ ಸೆಕೆಯ ಸಂದರ್ಭದಲ್ಲಿ ದಿನವಿಡೀ ಇವು ಎಲ್ಲಿರುತ್ತವೆ? ಬಾಯಾರಿದರೆ ಎಲ್ಲಿ ಹೋಗುತ್ತವೆ? ಎಷ್ಟು ಕೆರೆಗಳನ್ನು ನಾವು ಉಳಿಸಿದ್ದೇವೆ? ಎಷ್ಟು ಕೆರೆಗಳ ನೀರುಳಿದಿವೆ? ಹಾಗಿರುವಾಗ ನೀರಿಗಾಗಿ ಏನು ಮಾಡಬೇಕು ಈ ಪ್ರಾಣಿ ಪಕ್ಷಿಗಳು..? ಪ್ರಾಣಿ, ಪಕ್ಷಿಗಳು ಬಿಸಿಲಿನ ತೀವ್ರತೆ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ನಾನಾ ಸಂಕಟಗಳನ್ನು ತರುತ್ತಿದೆ. ಮನುಷ್ಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಾನಾ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾನೆ. ಆದರೆ, ಬೇಸಿಗೆಯಲ್ಲಿ ಕುಡಿಯಲು ನೀರು, ಆಹಾರ ಸಿಗದೆ ಪಕ್ಷಿಗಳು ಬಸವಳಿಯುತ್ತಿವೆ.
ರಾಜ್ಯದ ಜಲ ಮೂಲಗಳು ಬತ್ತಿಹೋಗುತ್ತಿವೆ. ತಾಪಮಾನ 35-36 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದು ಪಕ್ಷಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಪಕ್ಷಿಗಳನ್ನು ಎರಡು ವಿಧಗಳಲ್ಲಿ ಗುರುತಿಸಲಾಗುತ್ತದೆ. ಒಂದು, ಗುಬ್ಬಿ ಜಾತಿಯ ಸಣ್ಣ ಪಕ್ಷಿಗಳಾದರೆ, ಮತ್ತೊಂದು ಹದ್ದಿನಂತಹ ದೊಡ್ಡ ಪ್ರಭೇದದ ಪಕ್ಷಿಗಳು. ಬೇಸಿಗೆಯಲ್ಲಿ ಸಣ್ಣ ಪಕ್ಷಿಗಳಿಗೇನೂ ಅಷ್ಟಾಗಿ ತೊಂದರೆ ಕಾಣಿಸುವುದಿಲ್ಲ. ಆದರೆ, ಭಾರವಾದ ದೇಹಹೊತ್ತು ಆಕಾಶದಲ್ಲಿ ಹಾರುವ ದೊಡ್ಡ ಪಕ್ಷಿಗಳು ಬಿಸಿಲಿನ ತಾಪ ತಾಳದೆ ನೆಲಕ್ಕಪ್ಪಳಿಸುತ್ತವೆ. ಬೆಳಗ್ಗೆ ಸೂರ್ಯ ಹುಟ್ಟುವುದರೊಳಗೆ ಪಕ್ಷಿಗಳು ತಮ್ಮ ದಿನದ ಆಹಾರ ಹುಡುಕಿಕೊಳ್ಳುತ್ತವೆ. ಆಹಾರ ಸಿಗದಿದ್ದರೆ ಮಧ್ಯಾಹ್ನ ಆಹಾರ ಹುಡುಕಿಕೊಂಡು ಹಾರಾಡುವಾಗ ತೀವ್ರ ಆಯಾಸಗೊಂಡು ನೆಲಕ್ಕೆ ಬೀಳುತ್ತವೆ. ಕೂಡಲೇ ನೀರು ಕುಡಿಸಿ, ಆಹಾರ ಕೊಟ್ಟರೆ ಸ್ವಲ್ಪಹೊತ್ತಿನಲ್ಲೇ ಚೇತರಿಸಿಕೊಂಡು ಮತ್ತೆ ರೆಕ್ಕೆ ಬಡಿಯುತ್ತಾ ಆಕಾಶಕ್ಕೆ ಜಿಗಿಯುತ್ತವೆ. ನಿರ್ಜನ ಪ್ರದೇಶದಲ್ಲಿ ಬಿದ್ದರೆ ಪ್ರಾಣ ಬಿಡುತ್ತವೆ.
ವಾತಾವರಣದಲ್ಲಿ ಥರ್ಮಲ್ಸ್ (ಬಿಸಿಗಾಳಿ ಬುಗ್ಗೆ) ಇರುವುದೂ ಅವಶ್ಯ. ದೊಡ್ಡ ಪಕ್ಷಿಗಳು ಬಿಸಿಗಾಳಿ ಬುಗ್ಗೆ ಇದ್ದಷ್ಟೂ ಹೆಚ್ಚಿಗೆ ರೆಕ್ಕೆ ಬಡಿಯದೆ ಮೇಲಕ್ಕೆ ಹಾರುತ್ತವೆ. ಬೇಸಿಗೆಯಲ್ಲಿ ಆಹಾರ, ನೀರು ಸಿಗದಿದ್ದಾಗ ಮತ್ತು ವಾತಾವರಣದಲ್ಲಿ ಬಿಸಿಗಾಳಿ ಬುಗ್ಗೆ ಇಲ್ಲದಿದ್ದರೆ ಹೆಚ್ಚಿಗೆ ರೆಕ್ಕೆ ಬಡಿಯುತ್ತಾ ಹಾರಾಟ ಮಾಡುತ್ತವೆ. ರೆಕ್ಕೆ ಹೆಚ್ಚು ಬಡಿದಷ್ಟೂ ಆಯಾಸ ತೀವ್ರಗೊಳ್ಳುತ್ತದೆ ಎನ್ನುತ್ತಾರೆ ಪಕ್ಷಿ ತಜ್ಞರು.
ತಾರಸಿ ಮೇಲೆ ನೀರು ಇಡಿ
ಬೇಸಿಗೆಯಲ್ಲಿ ನಗರದ ಜನ ತಮ್ಮ ಮನೆಗಳ ಮೇಲೆ ಚಿಕ್ಕ ಬಕೆಟ್, ಮಣ್ಣಿನ ಮಡಿಕೆ ಅಥವಾ ಪಾತ್ರೆಯಲ್ಲಿ ನೀರು, ಕಾಳು ಇಟ್ಟರೆ ಅನುಕೂಲ ಎಂದು ಪಕ್ಷಿ ಪ್ರಿಯರು ಹೇಳುತ್ತಾರೆ.
ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಬೇಸಿಗೆ ರಜೆಯಲ್ಲಿರುವ ಮಕ್ಕಳಿಗೆ ಮನೆಯ ತಾರಸಿ ಮೇಲೆ ನೀರಿನ ಪಾತ್ರೆಗಳನ್ನು ಇಡಲು ಪೋಷಕರು ಜಾಗೃತಿ ಮೂಡಿಸಬೇಕು.







