ಉಡುಪಿ: ಮೂರು ದಿನ ಮೃತದೇಹದೊಂದಿಗೆ ಕಳೆದ ಮನೆಯವರು !
![ಉಡುಪಿ: ಮೂರು ದಿನ ಮೃತದೇಹದೊಂದಿಗೆ ಕಳೆದ ಮನೆಯವರು ! ಉಡುಪಿ: ಮೂರು ದಿನ ಮೃತದೇಹದೊಂದಿಗೆ ಕಳೆದ ಮನೆಯವರು !](https://www.varthabharati.in/sites/default/files/images/articles/2022/03/26/329508-1648311992.jpg)
ಉಡುಪಿ : ಕೊಳೆತ ಮೃತದೇಹದೊಂದಿಗೆ ಮನೆ ಮಂದಿ ಮೂರು ದಿನ ಕಳೆದಿರುವ ಘಟನೆ ಶುಕ್ರವಾರ ಸಂಜೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ಕಾಡಬೆಟ್ಟುವಿನ ಹರಿಶ್ಚಂದ್ರ ಪೂಜಾರಿ (70) ಎಂದು ಗುರುತಿಸಲಾಗಿದೆ.
ಇವರು ಅವಿವಾಹಿತರಾಗಿದ್ದು, ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದರು. ತನ್ನ ವಯೋವೃದ್ಧ ತಾಯಿ ಹಾಗೂ ಮಾನಸಿಕ ಅಸ್ವಸ್ಥೆ ತಂಗಿ ಜೊತೆ ವಾಸ ಮಾಡಿಕೊಂಡಿದ್ದರು.
ವಿಪರೀತ ಮದ್ಯ ವ್ಯಸನಿಯಾಗಿದ್ದ ಹರಿಶ್ಚಂದ್ರ, ಸುಮಾರು ಎರಡು ಮೂರು ದಿನಗಳ ಹಿಂದೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟರು. ಮೃತದೇಹವನ್ನು ಇಟ್ಟುಕೊಂಡು ತಾಯಿ ಮತ್ತು ತಂಗಿ ಮೂರು ದಿನ ಕಳೆದಿದ್ದರು. ಮೃತದೇಹ ಕೊಳೆತು ದುರ್ವಾಸನೆ ಹಬ್ಬಿದರಿಂದ ಸ್ಥಳೀಯರಿಗೆ ವಿಷಯ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ನಿರೀಕ್ಷಕ ಪ್ರಮೋದ್, ಠಾಣಾಧಿಕಾರಿ ಮಹೇಶ್, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಕಾನೂನು ಪ್ರಕ್ರಿಯೆ ನಡೆಸಿದರು. ಮೃತದೇಹ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು, ಎಂ.ಸಂದೀಪ್ ಕುಮಾರ್, ಮಹೇಶ್ ಪೂಜಾರಿ ಶಿರಿಬೀಡು ಸಹಕರಿಸಿದರು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.