ಬೆಂಗಳೂರು- ಕೋಲಾರ ಸೈಕಲ್ ರ್ಯಾಲಿ ಕೈಗೊಂಡ ಸಂಸದ ತೇಜಸ್ವಿ ಸೂರ್ಯ
ʼಸೈಕಲ್ ಟು ಫ್ರೀಡಮ್ʼ ಅಭಿಯಾನ
ಬೆಂಗಳೂರು : ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರವಿವಾರ ಇತರ ಸೈಕ್ಲಿಸ್ಟ್ ಗಳೊಂದಿಗೆ "ಸೈಕಲ್ ಟು ಫ್ರೀಡಮ್ "ಅಭಿಯಾನದ ಅಂಗವಾಗಿ ಬೆಂಗಳೂರಿನ ವಿಧಾನ ಸೌಧದಿಂದ ಕೋಲಾರದ ವರೆಗೆ 75 ಕಿಮೀ ಸೈಕ್ಲಥಾನ್ ಮೂಲಕ ಸಂಸದ ತೇಜಸ್ವಿ ಸೂರ್ಯ ಗಮನ ಸೆಳೆದಿದ್ದಾರೆ.
ಬೆಳಗ್ಗೆ 7 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ನಂತರ 5 ಘಂಟೆಗಳ ಅವಧಿಯಲ್ಲಿ ನಗರದ 450ಕ್ಕೂ ಅಧಿಕ ಉತ್ಸಾಹೀ ಸೈಕ್ಲಿಸ್ಟ್ ಗಳೊಂದಿಗೆ ಆರಂಭಗೊಂಡ ಸೈಕ್ಲಥಾನ್ ನಲ್ಲಿ ನರಸಾಪುರದಿಂದ ಜೊತೆಗೂಡಿದ ಕೋಲಾರ ಸಂಸದರಾದ ಎಸ್ ಮುನಿಸ್ವಾಮಿ ಸಹ ಸಾಥ್ ನೀಡಿದ್ದು ವಿಶೇಷ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ "ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ರವರ ಕರೆಯ ಮೇರೆಗೆ ಕ್ರೀಡೆ ಮತ್ತು ಸದೃಢ ಆರೋಗ್ಯ ವೃದ್ಧಿಗೆ ಸಾಕಷ್ಟು ಉತ್ತೇಜನ ದೊರಕಿದ್ದು, ವಿಶ್ವ ಯೋಗ ದಿನಾಚರಣೆ, ಫಿಟ್ ಇಂಡಿಯಾ ಅಭಿಯಾನ, ಒಲಿಂಪಿಕ್ಸ್ ಕ್ರೀಡೆಗಳನ್ನು ಒಳಗೊಂಡಂತೆ ಅನೇಕ ಉತ್ತೇಜನ ಕ್ರಮಗಳನ್ನು ಕೈಗೊಳ್ಳಲಾಗಿದೆ. "ಸೈಕಲ್ ಟು ಫ್ರೀಡಮ್" ನ ಮೂಲಕ ಪ್ರಧಾನಿ ನರೇಂದ್ರ ಮೋದಿ ರವರ ಆಶಯಕ್ಕೆ ಬೆಂಗಳೂರಿನ ಸೈಕ್ಲಿಂಗ್ ಸಮುದಾಯ ಜೊತೆಗೂಡಿದ್ದು ಅನುಕರಣೀಯ" ಎಂದು ತಿಳಿಸಿದರು.
ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಡಾ. ಕೆ ವೈ ವೆಂಕಟೇಶ್, ಪ್ಯಾರಾ ಅಥ್ಲೀಟ್ ಪಟು ಆನಂದ್ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಮಾತನಾಡಿದ ಕೋಲಾರ ಸಂಸದ ಎಸ್ ಮುನಿಸ್ವಾಮಿ, ಇಂತಹ ಅಭಿಯಾನಗಳು ಯುವಕರು ಫಿಟ್ನೆಸ್ ಕಡೆಗೆ ಗಮನ ಹರಿಸಲು ಪೂರಕವಾಗಿದ್ದು, ಸಾರ್ವಜನಿಕರಿಗೆ ಇಂತಹ ಅಭಿಯಾನಗಳಿಂದ ಸದೃಢ ಆರೋಗ್ಯದೆಡೆಗೆ ಗಮನ ಹರಿಸಲು ಸ್ಫೂರ್ತಿ ದೊರಕಲಿದೆ ಎಂದು ತಿಳಿಸಿದರು.
ಈ ಅಭಿಯಾನಕ್ಕೆ ಡೆಕತ್ಲಾನ್, ಫಾಸ್ಟ್ & ಅಪ್, ಜಯಂತ್ ಪ್ರೊ ಬೈಕ್ಸ್, ಬೆಂಗಳೂರು ರಾ೦ಡೋನಿಯರ್ಸ್, ರೆಕಾರ್ಡ್ ಮತ್ತು ನಿತ್ಯ ನಿರಂತರ ಸೇವಾ ಟ್ರಸ್ಟ್ ಗಳ ಸಹಯೋಗ ನೀಡಿ, ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.