ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳ ಪದಗ್ರಹಣ

ಮಂಗಳೂರು : ಹರ್ಡೀಕರ್ ಅವರಿಂದ ಸ್ಥಾಪಿತವಾದ ಜವಾಹರಲಾಲ್ ನೆಹರೂ ಮುನ್ನಡೆಸಿದ ಕಾಂಗ್ರೆಸ್ ಸೇವಾದಳದ ದ.ಕ. ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ರವಿವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೇವಾದಳ ಕಾರ್ಯಕರ್ತರು ಕಾರ್ಯಕ್ರಮಗಳಲ್ಲಿ ಸಕಲ ವ್ಯವಸ್ಥೆ ಮಾಡುವವರು ಎಂಬ ಕಲ್ಪನೆ ಬೇಡ. ಪಕ್ಷದ ಕಾರ್ಯಕರ್ತರಲ್ಲಿ ಶಿಸ್ತು ಮತ್ತು ದಕ್ಷತೆ ಹೆಚ್ಚಿಸುವ ಕೆಲಸಗಳನ್ನು ಮಾಡಬೇಕು ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ರಾಮಚಂದ್ರ ಮಾತನಾಡಿ ಸೇವಾದಳದ ವಲಯವಾರು ಐದು ದಿನಗಳ ತರಬೇತಿ ಶಿಬಿರ ಮೇಯಲ್ಲಿ ನಡೆಯಲಿದೆ ಎಂದರು.
ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳ ಹೊಸ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಸೇವಾದಳ ಜಿಲ್ಲಾ ಸಮಿತಿಯ ನೇತೃತ್ವ ವಹಿಸಿದ್ದ ದಿ. ಸುರೇಶ್ ಶೆಟ್ಟಿ ಅವರ ಪ್ರಾಮಾಣಿಕತೆ, ಸೇವ ಮನೋಭಾವ ಮತ್ತು ಸೇವಾದಳದೊಂದಿಗೆ ಅವರ ಸಂಬಂಧವನ್ನು ಸ್ಮರಿಸಲಾಯಿತು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶುಭೋದಯ ಆಳ್ವ, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ ಕುಮಾರ್ ದಾಸ್, ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಬಿಎಂ.ಅಬ್ಬಾಸ್ ಆಲಿ, ವೈದ್ಯಕೀಯ ಘಟಕದ ಅಧ್ಯಕ್ಷ ಡಾ.ಶೇಖರ್ ಪೂಜಾರಿ ಶುಭ ಹಾರೈಸಿದರು.
ಕಾರ್ಯಕರಮದಲ್ಲಿ ಕೆಪಿಸಿಸಿ ಸೇವಾದಳದ ಪದಾಧಿಕಾರಿ ಸಮೀರ್ ಪಜೀರ್, ತರಬೇತುದಾರರಾದ ವಿಶ್ವನಾಥ ಬಜಾಲ್, ಫಝಲ್ ರಹೀಂ ಪುತ್ತೂರು, ಗಿರಿಜಾ ಹೂಗಾರ್, ಮಕನಾಯಕ್ ಮತ್ತಿತರರು ಉಪಸ್ಥಿತರಿದ್ದರು.